– ಯಾರ ಮೇಲೂ ದರ್ಪ ತೋರಿದವರಲ್ಲ
ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನಡೆದುಕೊಂಡು ಬಂದು ಇಲ್ಲಿ ಕಾಣೆಯಾಗಿದ್ದಾರೆ. ಈ ವಿಷಯ ಕೇಳಿ ನಮಗೆ ಆಘಾತವಾಗಿದೆ. ಸಿದ್ಧಾರ್ಥ್ ಅವರು ಆಗರ್ಭ ಶ್ರೀಮಂತರಾಗಿದ್ದು, ಸಾವಿರಾರು ಮಂದಿಗೆ ಕೆಲಸ ನೀಡಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿಧಾನಸಭೆ ಮುಗಿಸಿ ರಾತ್ರಿ ಬರುವ ವೇಳೆ ನನಗೆ ಈ ಬಗ್ಗೆ ಮಾಹಿತಿ ತಿಳಿಯಿತು. ತಕ್ಷಣ ನಾನು ರಾತ್ರಿ ಸುಮಾರು 1.30ಕ್ಕೆ ಇಲ್ಲಿಗೆ ಬಂದೆ. ಇಲ್ಲಿ ಬಂದಾಗ ಪೊಲೀಸರು, ರೆವೆನ್ಯೂ ಡಿಪಾರ್ಟ್ ಮೆಂಟ್ ಮತ್ತು ಖಾಸಗಿ ತಜ್ಞರು ಈ ಪ್ರದೇಶಕ್ಕೆ ಬಂದಿದ್ದು, ಶೋಧಕಾರ್ಯ ಮುಂದುವರಿಸಿದ್ದರು. ಸಿದ್ಧಾರ್ಥ್ ಅವರು ಇಲ್ಲಿ ಕಾಲು ಜಾರಿ ಬಿದ್ದಿದ್ದಾರಾ ಅಥವಾ ಬೇರೆ ಕಡೆ ಹೋಗಿದ್ದಾರಾ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದರು.
ಸಿದ್ಧಾರ್ಥ್ ಅವರು ಈವರೆಗೂ ಸಾವಿರಾರು ಮಂದಿಗೆ ಕೆಲಸ ನೀಡಿದ್ದಾರೆ. ಅವರಿಗೆ ಅಧಿಕಾರ ಇದ್ದರೂ ಯಾವತ್ತೂ ಯಾರ ಮೇಲೂ ದರ್ಪ ತೋರಲಿಲ್ಲ. ನಮಗೆ ಯಾವಾತ್ತಾದರೂ ಸಿಕ್ಕಿದ್ದಾಗ ತುಂಬಾ ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ಎಂದು ಸಿದ್ಧಾರ್ಥ್ ಬಗ್ಗೆ ಮಾತನಾಡಿದರು.
ಏನಾಗಿದೆ ಎಂದು ನನಗೂ ಗೊತ್ತಿಲ್ಲ. ತನಿಖೆ ಮಾಡಿದ ನಂತರ ತಿಳಿಯ ಬೇಕು. ರಾತ್ರಿ ಎಸ್.ಎಂ ಕೃಷ್ಣ ಅವರು ಫೋನ್ ಮಾಡಿ ಮಾಹಿತಿ ತಿಳಿದುಕೊಂಡಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್ ಅವರು ಕೂಡ ಫೋನ್ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಸುರಕ್ಷಿತವಾಗಿ ವಾಪಸ್ ಬಂದರೆ ಸಾಕು ಎಂದು ಖಾದರ್ ಹೇಳಿದರು.