ಮೈಸೂರು: ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನ ಟಿ. ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
12 ವರ್ಷದ ಪ್ರಮೋದ್ ಮತ್ತು 17 ವರ್ಷದ ತೇಜೇಂದ್ರ ಪ್ರಸಾದ್ ಮೃತ ದುರ್ದೈವಿಗಳು. ಈ ಇಬ್ಬರು ಬನ್ನಹಳ್ಳಿಹುಂಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪುಣ್ಯ ಸ್ನಾನ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ.
ಪ್ರಮೋದ್ ಮತ್ತು ತೇಜೇಂದ್ರ ಪ್ರಸಾದ್ ಯುಗಾದಿ ಹಬ್ಬಕ್ಕಾಗಿ ಪುಣ್ಯ ಸ್ನಾನ ಮಾಡಲು ಮಧ್ಯಾಹ್ನ ತ್ರಿವೇಣಿ ಸಂಗಮ ನದಿಗೆ ಇಳಿದಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಈಜು ಬರದೇ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಅಲ್ಲೆ ಇದ್ದ ಸುತ್ತಮುತ್ತಲಿನವರು ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ನದಿಯಲ್ಲಿ ಮುಳುಗಿದವರ ಶವಕ್ಕಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದ್ದು, ನಂತರ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.