ಬೆಂಗಳೂರು: ಕಾಲಿನಿಂದ ಕುತ್ತಿಗೆಯನ್ನು ತುಳಿದು 2 ವರ್ಷದ ಕಂದಮ್ಮನ ಉಸಿರುಗಟ್ಟಿಸಿ ಕೊಲೆಗೈದಿರುವ ಅಮಾನವೀಯ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ವರ್ಷದ ವೆಂಕಟೇಶ್ ಕೊಲೆಯಾದ ಮಗು. ಸೋಲದೇವನಹಳ್ಳಿಯ ನಿವಾಸಿ ಬಸವರಾಜು ಮತ್ತು ವೆಂಕಮ್ಮ ದಂಪತಿಯ ಮಗ. ಎರಡು ದಿನಗಳ ಹಿಂದೆ ಪಕ್ಕದ ಮನೆಯ ಈರಣ್ಣ ಹಾಗೂ ಬಸವರಾಜು ಕುಟುಂಬಕ್ಕೆ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರಕ್ಕೆ ಜಗಳವಾಗಿತ್ತು. ಜಗಳದ ಬಳಿಕ ಈರಣ್ಣಣೆ ಮಗುವನ್ನು ಕೊಲೆ ಮಾಡಿದ್ದಾನೆ ಎಂಬ ವೆಂಕಟೇಶ್ ಪೋಷಕರು ಆರೋಪಿಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಈರಣ್ಣ ಮತ್ತು ಬಸವಾರಜು ಕುಟುಂಬಗಳ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ವೆಂಕಟೇಶ್ ನಾಪತ್ತೆಯಾಗಿ. ಸಂಜೆ 5 ಗಂಟೆ ವೇಳೆ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಕಂದಮ್ಮನ ಶವ ಪತ್ತೆಯಾಗಿದೆ.
ಮಧ್ಯಾಹ್ನ ಈರಣ್ಣನೇ ಮಗುವನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು ದಟ್ಟವಾಗಿವೆ. ಘಟನೆ ಬಳಿಕ ಈರಣ್ಣ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.