– ಪಾಲಿಕೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ
ವಿಜಯಪುರ: ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ನಗರದ ಬಡಿಕಮಾನ್ ರಸ್ತೆಯ ಬಳಿ ನಡೆದಿದೆ.
ಮೃತ ಮಗುವನ್ನು 2 ವರ್ಷದ ಯಾಸೀನ್ ಸದ್ದಾಂ ಮುಲ್ಲಾ ಎಂದು ಗುರುತಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆ ಹಿನ್ನೆಲೆ ಚರಂಡಿ ಮೇಲಿನ ಕಲ್ಲು ತೆಗೆಯಲಾಗಿತ್ತು. ಬಳಿಕ ಮಹಾನಗರ ಪಾಲಿಕೆಯವರು (City Corporation) ಚರಂಡಿಯ ಮೇಲ್ಭಾಗವನ್ನು ಮುಚ್ಚಿರಲಿಲ್ಲ. ಇದರಿಂದಾಗಿ ಮಂಗಳವಾರ (ಅ.15) ಸಂಜೆ ಮಗು ಚರಂಡಿಗೆ ಬಿದ್ದು ಸಾವನ್ನಪ್ಪಿದೆ. ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆಯ ವಿರುದ್ಧ ಸ್ಥಳೀಯರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Gol Gumbaz Police Station) ಈ ಘಟನೆ ನಡೆದಿದೆ.