ಬೆಳಗಾವಿ: ರಾಯಭಾಗ ತಾಲೂಕಿನಲ್ಲಿ ತೆರೆಯಲಾದ ಎರಡು ನಿರಾಶ್ರಿತರ ಕೇಂದ್ರದಲ್ಲಿ 100 ಹೆಚ್ಚು ಸಂತ್ರಸ್ತರು ತಂಗಿದ್ದು ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ.
ಹುಬ್ಬರವಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ನಿರಾಶ್ರಿತ ಕೇಂದ್ರದಲ್ಲಿ ಎರಡೇ ಕೊಠಡಿಗಳಿದ್ದು, ಇದರಲ್ಲೇ 100 ಕ್ಕೂ ಹೆಚ್ಚು ಮಂದಿ ತಂಗಿದ್ದಾರೆ.
ಕಳೆದ ಒಂದು ವಾರದಿಂದ ಸಂತ್ರಸ್ತರು ಎರಡೇ ಕೋಣೆಗಳಲ್ಲಿ ರಾತ್ರಿ ಮಲಗಿಕೊಂಡು ಕಾಲ ಕಳೆಯುತ್ತಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಮಾಂಜರಿ, ಯಡೂರು ಸೇರಿದಂತೆ ವಿವಿಧ ಗ್ರಾಮಗಳ 91 ಕುಟುಂಬಗಳ 215 ಜನ ಈ ನಿರಾಶ್ರಿತ ಕೇಂದ್ರದಲ್ಲಿದ್ದಾರೆ.
ಪಬ್ಲಿಕ್ ಟಿವಿ ಈ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನ ಮಾತ್ರ ಇದ್ದರು. ಮಹಿಳೆಯರು, ವೃದ್ಧರು, ಮಕ್ಕಳು ಎಲ್ಲರನ್ನೂ ಎರಡೇ ಕೋಣೆಯಲ್ಲಿ ಕೂಡಿ ಹಾಕಲಾಗಿದೆ. ಎರಡು ಕೋಣೆಗಳಲ್ಲಿ ತಮ್ಮ ದುಸ್ಥರ ಜೀವನವನ್ನು ಸಂತ್ರಸ್ತರು ಸಾಗಿಸುತ್ತಿದ್ದಾರೆ. ಒಂದು ವೇಳೆ ಸಾಂಕ್ರಾಮಿಕ ರೋಗಗಳು ಹರಡಿದರೆ ಏನು ಗತಿ ಎಂಬ ಭಯ ಇದೀಗ ನಿರಾಶ್ರಿತರಲ್ಲಿ ಮೂಡಿದೆ.
ಇಲ್ಲಿ ನಮಗೆ ಊಟದ ವ್ಯವಸ್ಥೆ ಸರಿ ಇದೆ. ಆದರೆ, ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೇಗೆ ಜೀವನ ಸಾಗಿಸುವುದು? ನಮ್ಮ ಮನೆಗಳೆಲ್ಲ ನೀರಲ್ಲಿ ಮುಳುಗಿ ಹೋಗಿವೆ. ಏನೇ ಆದರೂ ಮನೆಯಲ್ಲಿ ಇದ್ದಂತ ಸುಃಖ ನಮಗೆ ಸಿಗುವುದಿಲ್ಲ ಎಂದು ಮಹಿಳೆಯರು ಪಬ್ಲಿಕ್ ಟಿವಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.