ಶಿವಮೊಗ್ಗ: ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಮಂದಿ ದರೋಡೆಕೋರರನ್ನು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಆನಂದ್ ಹಾಗು ವಿಶಾಲ್ ಅರೆಸ್ಟ್ ಆದ ದರೋಡೆಕೋರರು. ಕಳೆದ ತಿಂಗಳ 30ರಂದು ನಗರದ ನೇತಾಜಿ ವೃತ್ತದಲ್ಲಿ ವ್ಯಕ್ತಿಯೊಬ್ಬರು ಕಾರು ರಿಪೇರಿಗಾಗಿ ಗ್ಯಾರೇಜ್ ಹುಡುಕಾಡುತ್ತಿದ್ದರು. ಇದನ್ನು ಗಮನಿಸಿದ ದರೋಡೆಕೋರರಾದ ಆನಂದ್ ಹಾಗೂ ವಿಶಾಲ್ ಗ್ಯಾರೇಜ್ ತೋರಿಸುವುದಾಗಿ ಕಾರು ಹತ್ತಿದ್ದಾರೆ.
ಕಾರನ್ನು ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಮಾಲೀಕನಿಗೆ ಚಾಕು ತೋರಿಸಿ 62,200 ರೂ. ಸುಲಿಗೆ ಮಾಡಿಕೊಂಡು ಹೋಗಿದ್ದರು. ಹಣ ಕಳೆದುಕೊಂಡ ವ್ಯಕ್ತಿ ಈ ಬಗ್ಗೆ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಈ ಪ್ರಕರಣವನ್ನು ಕೇವಲ 4 ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ದರೋಡೆಕೋರರನ್ನು ಬಂಧಿಸಿ 57,000 ರೂ. ಕೃತ್ಯಕ್ಕೆ ಬಳಸಿದ್ದ ಚಾಕು ಹಾಗು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.