ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಯಾಕಂದ್ರೆ ನನಗೆ ಸಿದ್ದರಾಮಯ್ಯ ಗೊತ್ತು, ಯಡಿಯೂರಪ್ಪ ಗೊತ್ತು ಎಂದು ಕೆಲವರು ಹೇಳುತ್ತಾ ಬಂದು ಲಕ್ಷ ಲಕ್ಷ ದೋಚುತ್ತಾರೆ. ಇದಕ್ಕೆ ಇಬ್ಬರು ವ್ಯಕ್ತಿಗಳು 30 ಲಕ್ಷ ಕಳೆದುಕೊಂಡಿರುವುದೇ ಸಾಕ್ಷಿ
ಚಂದ್ರಶೇಖರ್ ಮೋಸ ಮಾಡಿದ ವ್ಯಕ್ತಿ. ಈತ ಕುಣಿಗಲ್ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ನನಗೆ ಸಿದ್ದರಾಮಯ್ಯ ಗೊತ್ತು, ಬಿ.ಎಸ್.ಯಡಿಯೂರಪ್ಪ ಅವರೂ ಗೊತ್ತು. ಅವರಿಗೆ ಹೇಳಿ ನಿಮಗೆ ವಿಧಾನಸೌಧದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಶಿವಣ್ಣ ಮತ್ತು ಹನುಮಂತಪ್ಪನನ್ನು ನಂಬಿಸಿದ್ದಾನೆ. ಆದರೆ ಚಂದ್ರಶೇಖರ್ ಮಾತನ್ನು ನಂಬಿದ ಶಿವಣ್ಣ ಮತ್ತು ಹನುಮಂತಪ್ಪ ಇದೀಗ ಮೂರು ನಾಮ ಹಾಕಿಸಿಕೊಂಡಿದ್ದಾರೆ.
ಚಂದ್ರಶೇಖರ್ ಕಳೆದ 6 ತಿಂಗಳ ಹಿಂದೆ ಹೋಟೆಲ್ ಒಂದರಲ್ಲಿ ಶಿವಣ್ಣ ಹಾಗೂ ಹನುಮಂತಪ್ಪನಿಗೆ ಪರಿಚಯನಾಗಿದ್ದಾನೆ. ನಾನು ಅಮೃತಾನಂದಮಯಿ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಆಶ್ರಮಕ್ಕೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಬರುತ್ತಿರುತ್ತಾರೆ. ನಮಗೆ ತುಂಬಾ ಕ್ಲೋಸ್. ಏನೇ ಕೆಲಸ ಬೇಕಿದ್ದರೂ ಮಾಡಿಸಿಕೊಡುತ್ತೇನೆ ಎಂದು ಪುಸಲಾಯಿಸಿದ್ದಾನೆ. ಇವನ ಮಾತನ್ನು ನಂಬಿ ಇಬ್ಬರೂ 30 ಲಕ್ಷ ಕಳೆದುಕೊಂಡಿದ್ದಾರೆ.
ಸದ್ಯ ಆರೋಪಿ ಚಂದ್ರಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಂಚಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.