ಬೆಂಗಳೂರು: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಕಾರ್ ಸರ್ವಿಸ್ ರಸ್ತೆಯಿಂದ ಹೊರಹೋಗಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಕ್ಯಾಬ್ ಚಾಲಕ ಶ್ರೀಧರ್ ಮತ್ತು ಪುನೀತ್ ಮೃತ ದುರ್ದೈವಿಗಳು.
ಮೃತರು ಹಾಸನ ಹೊಳೆನರಸಿಪುರ ತಾಲೂಕಿನ ಗೊಂದಮಲೇನಹಳ್ಳಿಯವರು ಎಂದು ತಿಳಿದುಬಂದಿದೆ. ಇನ್ನೂ ಅಪಘಾತದ ತೀವ್ರತೆಗೆ ಮೃತರಿಬ್ಬರ ಮೆದಳು ಛಿದ್ರವಾಗಿದೆ. ಅಪಘಾತದಲ್ಲಿ ಮತ್ತೊಬ್ಬ ಪ್ರಯಾಣಿಕ ಸುಮ್ಮನ್ ಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಭೀಕರ ಅಪಘಾತಕ್ಕೆ ಕಾರಿನ ಅತೀಯಾದ ವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.