ಬೆಂಗಳೂರು, ಮಂಡ್ಯ: ಗಣೇಶ ವಿಸರ್ಜನೆಯ ವೇಳೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಸಂಭವಿಸಿದ ಅವಘಡದಿಂದ ಇಬ್ಬರು ಬಲಿಯಾದ ಘಟನೆ ನಡೆದಿದೆ.
ಅವಘಡಕ್ಕೆ ಬೆಂಗಳೂರಿನಲ್ಲಿ 15 ವರ್ಷದ ವೆಂಕಟೇಶ, ಮಂಡ್ಯದಲ್ಲಿ 25 ವರ್ಷದ ವಿಜಯಕುಮಾರ್ ಬಲಿಯಾದ ದುರ್ದೈವಿಗಳು. ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಮೂರನೇ ದಿನ ಮೂರ್ತಿ ವಿಸರ್ಜನೆ ಮಾಡಲು ಹೊರಟ ವೇಳೆ ಟೆಂಪೋ ಬಾಲಕ ವೆಂಕಟೇಶ್ ಮೇಲೆ ಹರಿದಿದೆ. ಪರಿಣಾಮ ಗಣೇಶ ವಿಸರ್ಜನೆ ನೋಡಲು ಬಂದಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದನು.
ಗಣೇಶ ಹೊತ್ತ ಟೆಂಪೋ ಚಾಲಕ ಕುಡಿದು ವಾಹನ ಚಲಾಯಿಸಿದ್ದೇ ಇದಕ್ಕೆ ಕಾರಣ ಅಂತ ಬಾಲಕನ ಪೋಷಕರು ಆರೋಪಿಸುತ್ತಿದ್ದಾರೆ. ಗಜಾನನ ಯುವಕರ ಸಂಘ ಕುರುಬರಹಳ್ಳಿ, ಜೆಸಿ ನಗರದ ಕೆಇಬಿ ಬಳಿ ಗಣೇಶನ ಇಟ್ಟು, ಭಾನುವಾರ ರಾತ್ರಿ ಮೂರ್ತಿ ವಿಸರ್ಜನೆ ಮಾಡಲು ಹೊರಟಿದ್ರು. ಅದ್ರೇ 11ನೇ ಮುಖ್ಯರಸ್ತೆಗೆ ಬರುತ್ತಿದ್ದಂತೆ ಗಾಡಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಗಾಡಿಗಳಿಗೆ, ಜನರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಮಾಯಕ ಬಾಲಕನ ಸಾವಿನ ಜೊತೆಗೆ ಹಲವರು ಗಾಯಗೊಂಡಿದ್ದಾರೆ. ಮರಳುದಿಬ್ಬಕ್ಕೆ ಟೆಂಪೊ ಡಿಕ್ಕಿ ಹೊಡೆದು ನಿಲ್ಲದೇ ಇದ್ದಲ್ಲಿ ಮತ್ತಷ್ಟು ಅನಾಹುತ ಆಗುತ್ತಿತ್ತು. ತಮಟೆ ಶಬ್ದ ಕೇಳಿ ಮನೆಯಿಂದ ಹೊಗಡೆ ಬಂದ ನನ್ನ ತಮ್ಮ ಈ ರೀತಿ ಸಾವನ್ನಪ್ಪಿದ್ದಾನೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ಬಾಲಕನ ಕುಟುಂಬಸ್ಥರು ಇದೀಗ ಆರೋಪಿಸುತ್ತಿದ್ದಾರೆ.
ಯುವಕ ಸಾವು: ಇನ್ನು ಮಂಡ್ಯದಲ್ಲಿ ಕೂಡ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿಜಯ್ ಕುಮಾರ್ ಎಂಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿಯಲಿನೀ ಅವಘಡ ಸಂಭವಿಸಿದೆ. ಸದ್ಯ ವಿಜಯ್ ಕುಮಾರ್ ಮೃತದೇಹ ಕೂಡಾ ಪತ್ತೆಯಾಗಿದೆ. ನಿನ್ನೆ ಸಂಜೆಯಿಂದ ವಿದ್ಯುತ್ ದೀಪಗಳ ಸಹಾಯದಿಂದ ತಡರಾತ್ರಿವರೆಗೂ ಶೋಧ ನಡೆಸಿ ಶವ ಹುಡುಕಿ ಹೊರ ತೆಗೆಯಲಾಗಿದೆ. ಸದ್ಯ ವಿಜಯ್ಕುಮಾರ್ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಕೊಪ್ಪಳದಲ್ಲಿ ಲಾಠಿ ಚಾರ್ಜ್: ಗಣಪತಿ ವಿಸರ್ಜನೆ ವೇಳೆ ಕೊಪ್ಪಳದಲ್ಲಿ ಪೊಲೀಸರು ಹಾಗೂ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದ್ದಾರೆ. ನಗರದ ಕಿನ್ನಾಳ ರಸ್ತೆಯಲ್ಲಿ ಏಕದಂತ ಮಂಡಳಿಯವರು ಗಣಪತಿ ವಿಸರ್ಜನೆಗೆಂದು ಡಿಜೆ ಬಳಸಿಕೊಂಡು ಮೆರವಣಿಗೆ ಹೊರಟಿದ್ದರು. ಆ ವೇಳೆ ಯಾಕೆ ಡಿಜೆ ಬಳಸಿದ್ದೀರಿ ಅಂತ ಪೊಲೀಸರು ಸೌಂಡ್ ಸಿಸ್ಟಮ್ ವಶಪಡಿಸಿಕೊಂಡರು. ಆಗ ಪೊಲೀಸರ ಕ್ರಮ ಖಂಡಿಸಿದ ಯುವಕರು ನಾವು 2 ಸಾವಿರ ಮೆಗಾವ್ಯಾಟ್ ನೊಳಗೆ ಇರೋ ಸೌಂಡ್ ಸಿಸ್ಟಮ್ ಬಳಸಿದ್ದೀವಿ. ಪೊಲೀಸ್ ಇಲಾಖೆ ನೀಡಿರೋ ಸೂಚನೆ ಪಾಲಿಸಿದ್ದೇವೆ ಅಂತ ವಾದಿಸಿದ್ರು. ವಿಸರ್ಜನೆಗೆ ತೆಗೆದುಕೊಂಡು ಹೋಗ್ತಿದ್ದ ಗಣಪತಿಯನ್ನ ಟ್ರ್ಯಾಕ್ಟರ್ ನಿಂದ ಕೆಳಗಿಳಿಸಿ ಅಶೋಕ್ ಸರ್ಕಲ್ ನಲ್ಲಿಟ್ಟು ಕೆಲಕಾಲ ಪ್ರತಿಭಟನೆ ನಡೆಸಿದ್ರು. ಈ ವೇಳೆ ಪೊಲೀಸರು ಹಾಗೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.