ಶಿವಮೊಗ್ಗ: ಸ್ನೇಹಿತರಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದೆ.
ಶ್ರೀಕಾಂತ್(29) ಮತ್ತು ಪ್ರಕಾಶ್ (32) ಇಬ್ಬರು ಸ್ಮಶಾನದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಹೊಸನಗರದಲ್ಲಿ ಕೂಲಿ ಕಾರ್ಮಿಕರಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಹೊಸನಗರದ ಮಾರಿಗುಡ್ಡದಲ್ಲಿ ಇಬ್ಬರು ಕುಡಿಯುತ್ತಾ ಕುಳಿತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ವಾಕಿಂಗ್ ಹೋಗುವವರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಶ್ರೀಕಾಂತ್ ಮತ್ತು ಪ್ರಶಾಂತ್ ಇಬ್ಬರು ತುಂಬಾ ಕುಡಿಯುತ್ತಿದ್ದರು. ಈ ಕಾರಣಕ್ಕೆ ಮದುವೆಗೆಂದು ನೋಡಿದ್ದ ಹುಡುಗಿಯರು ನಿರಾಕರಿಸುತ್ತಿದ್ದರು. ಹುಡುಗಿಯರು ತಮ್ಮನ್ನು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಜಾಸ್ತಿ ಕುಡಿಯುತ್ತಿದ್ದರು. ಈ ವಿಚಾರಕ್ಕೆ ಖಿನ್ನತೆಗೆ ಜಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.