ಮೈಸೂರು/ ರಾಮನಗರ: ಹಂದಿ ಬೇಟೆಗೆ ಜಮೀನಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆಯ ಎನ್.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ಸಾವು ಬದುಕಿನೊಂದಿಗೆ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಆಹಾರ ಅರಸಿ ಬಂದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 4 ದಿನಗಳ ಹಿಂದೆ ಗಿರೀಶ್ ಎಂಬುವವರ ತೋಟದಲ್ಲಿ ಬೋನನ್ನ ಇಡಲಾಗಿತ್ತು. ರಾತ್ರಿ ಆಹಾರ ಅರಸಿ ಬಂದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಕಳೆದ 2 ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಎರಡು ಚಿರತೆಗಳ ಹಾವಳಿಗೆ ಸಾಕಷ್ಟು ಪ್ರಾಣಿಗಳು ಬಲಿಯಾಗಿದ್ದವು. ಇದೀಗ ಒಂದು ಚಿರತೆ ಸೆರೆಯಾಗಿದ್ದು, ಮತ್ತೊಂದು ಚಿರತೆಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಇಲಾಖೆಗೆ ಮನವಿ ಮಾಡಿದ್ದಾರೆ. ಸೆರೆ ಸಿಕ್ಕ ಚಿರತೆ ಗಾಯಗೊಂಡಿದ್ದು ಚಿಕಿತ್ಸೆ ನೀಡಿ ಬಳಿಕ ಬನ್ನೇರುಘಟ್ಟ ಅರಣ್ಯಕ್ಕೆ ರವಾನಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.