– ಮೃತರಲ್ಲಿ ಒಬ್ಬ 15 ದಿನಗಳ ಹಿಂದೆಯಷ್ಟೇ ಪ್ರೀತಿಸಿದ ಯುವತಿ ಜೊತೆ ಮದುವೆಯಾಗಿದ್ದ
ಮೈಸೂರು: ನೀರಿನಲ್ಲಿ ಜಲ ಸಮಾಧಿ ಆಗ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಸಹೋದರರು ಬಾಲಕನನ್ನು ಬದುಕಿಸಿ ತಾವೇ ಜಲಸಮಾಧಿ ಆಗಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವರುಣಾ ನಾಲೆಯಲ್ಲಿ ಈ ದುರಂತ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಮುಳುಗ ತೊಡಗಿದ್ದಾನೆ. ಇದೇ ವೇಳೆಗೆ ನಾಲೆಯ ಮೇಲ್ಗಡೆ ನಡೆದುಕೊಂಡು ಬರುತ್ತಿದ್ದ ಸಹೋದರರು ಬಾಲಕ ಮುಳುಗುವುದನ್ನು ನೋಡಿ ಆತನ ರಕ್ಷಣೆಗೆ ನಾಲೆಗೆ ಹಾರಿದ್ದಾರೆ. ಮುಳುಗುತ್ತಿದ್ದ ಬಾಲಕನನ್ನು ನೀರಿನಿಂದ ಮೇಲೆತ್ತಿದ್ದಾರೆ. ಆದರೆ, ಈ ಸಹೋದರರು ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲು ಆಗದೆ ಜಲಸಮಾಧಿ ಆಗಿದ್ದಾರೆ.
ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರ ನವ ವಿವಾಹಿತ (25) ನಂದನ್ ಹಾಗೂ ಅವರ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟ ಸಹೋದರರು. ನಿನ್ನೆ ಸಂಜೆ ವರಣಾ ನಾಲೆಯಲ್ಲಿ ಈ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ತೆರೆಳಿದ್ದ ಬಾಲಕ ಮಂಜು, ನೀರಿನಲ್ಲಿ ಮುಳುಗುತ್ತಿದ್ದ. ಈ ವೇಳೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಈ ಸಹೋದರರು ನೀರಿನಲ್ಲಿ ಮುಳುಗಿದ್ದವನನ್ನು ರಕ್ಷಿಸಲು ಮುಂದಾಗಿ ಬಾಲಕನನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲಾಗದೆ ನಂದನ್, ರಾಕೇಶ್ ನೀರುಪಾಲಾಗಿದ್ದಾರೆ.
ಮೃತ ನಂದನ್, ರಾಕೇಶ್ ಇಬ್ಬರೂ ಸಹೋದರರ ಮಕ್ಕಳು. ಹದಿನೈದು ದಿನಗಳ ಹಿಂದೆಯಷ್ಟೆ ನಂದನ್ ತಾನು ಪ್ರೀತಿಸುತ್ತಿದ್ದ ಚನ್ನಪಟ್ಟಣದ ಯುವತಿ ಜೊತೆ ಪೋಷಕರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದ.

