ಹಾಸನ: ಕೃಷಿ ಹೊಂಡಕ್ಕೆ (Farm Pond) ಬಿದ್ದ ಆಟಿಕೆ ರೈಲನ್ನು ತರಲು ನೀರಿಗೆ ಇಳಿದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಸಕಲೇಶಪುರ (Sakleshpura) ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕರನ್ನು ಗ್ರಾಮದ ಕೃಷ್ಣ ಎಂಬವರ ಪುತ್ರ ಪ್ರಣಯ್ (7) ಹಾಗೂ ಪ್ರಶಾಂತ್ ಎಂಬವರ ಪುತ್ರ ನಿಶಾಂತ್ ಎಂದು ಗುರುತಿಸಲಾಗಿದೆ. ಪ್ರಣಯ್ ಎರಡನೇ ತರಗತಿ ಓದುತ್ತಿದ್ದು, ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ. ಈ ಇಬ್ಬರೂ ಶಾಲೆಗೆ ರಜೆ ಇದ್ದ ಕಾರಣ ಕೂಲಿಗೆ ಹೋಗಿದ್ದ ಪೋಷಕರ ಜೊತೆ ಕಾಫಿ ತೋಟಕ್ಕೆ ಹೋಗಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು
ಕಾಫಿ ತೋಟದ ಕೃಷಿ ಹೊಂಡದ ಬಳಿ ಆಟ ಆಡುತ್ತಾ, ಆಟಿಕೆ ರೈಲು ನೀರಿಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಇಬ್ಬರು ನೀರಿಗಿಳಿದಿದ್ದು, ಮುಳುಗಿ ಸಾವನ್ನಪ್ಪಿದ್ದಾರೆ. ಬಹಳ ಸಮಯದವರೆಗೂ ಮಕ್ಕಳು ಕಾಣಿಸದೇ ಇದ್ದಾಗ, ಪೋಷಕರು ಹುಡುಕಾಟ ನಡೆಸಿದ್ದಾರೆ. ಆಗ ಕೃಷಿ ಹೊಂಡದ ಬಳಿ ಚಪ್ಪಲಿಗಳು ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳ ಶವ ಪತ್ತೆಯಾಗಿವೆ.
ಶವಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾಸಲಾಗಿದೆ. ಆಸ್ಪತ್ರೆ ಬಳಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ