ಮುಂಬೈ: ಬಹುಮತ ಪಡೆದು ಅಧಿಕಾರಕ್ಕೆ ಏರಿದರೂ ಮಹಾಯತಿ (Mahayuti) ಒಕ್ಕೂಟದಲ್ಲಿ ಮುಖ್ಯಮಂತ್ರಿ ಮತ್ತು ಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ( Eknath Shinde) ಅವರು ಇಂದು ನಿಗದಿಯಾಗಿದ್ದ ಸಭೆಗಳನ್ನು ದಿಢಿರ್ ರದ್ದು ಮಾಡಿ ಅನಿರೀಕ್ಷಿತವಾಗಿ ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಶಿಂಧೆ ಅವರು ಶುಕ್ರವಾರ ಬೆಳಿಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಭೆ ನಡೆಸಿದ ಬಳಿಕ ಮುಂಬೈಗೆ ಆಗಮಿಸಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ.
ದೆಹಲಿ ಸಭೆ ಧನಾತ್ಮಕವಾಗಿದೆ ಎಂದು ಶಿಂದೆ ಹೇಳಿದ್ದರೂ ಈಗ ಎಲ್ಲಾ ಸಭೆಗಳನ್ನು ರದ್ದು ಮಾಡಿ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಶನಿವಾರ ಶಿಂಧೆ ಮುಂಬೈಗೆ ಮರಳುವ ನಿರೀಕ್ಷೆಯಿದೆ.
ದೆಹಲಿ ಸಭೆಯಲ್ಲಿ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತಾರೆ. ನೀವು ಉಪಮುಖ್ಯಮಂತ್ರಿಯಾಗಬೇಕು ಎಂದು ಎಂದು ತಿಳಿಸಲಾಯಿತು. ಆರಂಭದಲ್ಲಿ ಶಿಂಧೆ ಈ ಆಫರ್ ಸ್ವೀಕರಸಲು ಒಪ್ಪದೇ ಇದ್ದರೂ ನಂತರ ಅವರು ಒಪ್ಪಿಗೆ ಸೂಚಿಸಿದರು. ಅಷ್ಟೇ ಅಲ್ಲದೇ ತನಗೆ ಗೃಹ ಖಾತೆಯನ್ನು ನೀಡುವಂತೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಫಡ್ನವಿಸ್ ಸಿಎಂ, ಪವಾರ್ ಡಿಸಿಎಂ?
ಒಬ್ಬರು ಸಿಎಂ, ಇಬ್ಬರು ಡಿಸಿಎಂ ಹುದ್ದೆಗಳು ಮಹಾಯುತಿ ಸರ್ಕಾರದಲ್ಲಿ ಇರಲಿದೆ. ಬಿಜೆಪಿಗೆ 20 ಮಂತ್ರಿ ಸ್ಥಾನ ಸಿಗಲಿದೆ. ಎನ್ಸಿಪಿಗಿಂತ ಶಿವಸೇನೆ ಹೆಚ್ಚು ಮಂತ್ರಿ ಸ್ಥಾನ ದೊರೆಯಲಿದೆ.
ಮುಖ್ಯಮಂತ್ರಿ ಹುದ್ದೆ ಏರಿದವರು ಉಪಮುಖ್ಯಮಂತ್ರಿ ಆಗುವುದು ವಿರಳ. ಹೀಗಾಗಿ ಶಿಂಧೆ ಉಪಮುಖ್ಯಮಂತ್ರಿ ಆಗುತ್ತಾರಾ ಇಲ್ಲವೋ ಎನ್ನುವ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ.