ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು (Srinivas Naidu) ಅವರ ಕೋಟಿ ರೂ. ಬೆಳೆಬಾಳುವ ರೇಂಜ್ ರೋವರ್ (Range Rover) ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ (Muttappa Rai) ಪುತ್ರ ಸೇರಿದಂತೆ 9 ಜನರ ವಿರುದ್ಧ ಸದಾಶಿವನಗರ ಪೊಲೀಸರು 188 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
2021ರ ಅಕ್ಟೋಬರ್ ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್ ಮೆಂಟ್ (Saptagiri Apartment Sadashivanagar) ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರನ್ನು ಆರೋಪಿಗಳು ಸುಟ್ಟುಹಾಕಿದ್ದರು. ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕ್ಕಿ ರೈ (Rikki Rai) ಸೂಚನೆಯಂತೆ ಕಾರು ಸುಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬ್ಯಾಂಕ್ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್ಗೆ ಅರ್ಜಿ
ಘಟನೆ ಕುರಿತು ತನಿಖೆ ನಡೆಸಿದ ಸದಾಶಿವನಗರ ಪೊಲೀಸರು 33ನೇ ಎಸಿಎಂಎಂ ಕೋರ್ಟ್ಗೆ 188 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮತ್ತು ಉದ್ಯಮಿ ಶ್ರೀನಿವಾಸ್ ನಾಯ್ಡು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ಅವರ ನಿಧನದ ಬಳಿಕ ಶ್ರೀನಿವಾಸ್ ನಾಯ್ಡು ರೈ ಗ್ರೂಪಿನಿಂದ ಹೊರಬಂದಿದ್ದರು. ನಾಯ್ಡು ಹೊರ ಬಂದಿದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸಿ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ಈಗ ವ್ಯಕ್ತವಾಗಿದೆ.