– ಪಿಸಿಸಿಎಫ್ ನೇತೃತ್ವದ ತಂಡದಿಂದ ತೀವ್ರ ಪರಿಶೀಲನೆ
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 12 ಅಡಿ ಉದ್ದ 12 ವರ್ಷ ಪ್ರಾಯದ 250 ಕೆಜಿಗೂ ಅಧಿಕ ತೂಕದ ಹುಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅಲ್ಲದೇ ಪಿಸಿಸಿಎಫ್ (PCCF) ನೇತೃತ್ವದ ತಂಡ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಬಗ್ಗೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು,ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಹುಲಿ ಹತ್ಯೆಯೂ ಕೂಡ ಪ್ರತೀಕಾರಕ್ಕೆ ನಡೆದಿದೆ ಅನ್ನೋ ವಾದ ಪರಿಸರವಾದಿಗಳಾಗಿದ್ದಾಗಿದೆ.
ಮಲೆ ಮಹದೇಶ್ವರ ವನ್ಯಧಾಮದ ಹನೂರು (Hanuru) ತಾಲೂಕಿನ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಹುಲಿಯ ಹತ್ಯೆ ನಡೆದಿರುವುದೇ ಪ್ರತೀಕಾರಕ್ಕೆ ಎಂಬ ಆತಂಕಕಾರಿ ವಿಚಾರ ಗೊತ್ತಾಗ್ತಿದೆ. ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ ಮೂರು ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದಾರೆ. ಆದ್ರೆ ಹುಲಿಯ ತೂಕ ಹೆಚ್ಚಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಎರಡು ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ (Tiger Death) ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿದರು ಕೂಡ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಬಾರದೆಂದು ಹುಲಿಯ ಕರುಳು ಹಾಗೂ ಲಿವರ್ ಎರಡನ್ನೂ ಕೂಡ ಬೇರೆಡೆ ತೆಗೆದುಕೊಂಡು ಹೋಗಿ ಬಿಸಾಕಿ ಸಾಕ್ಷ್ಯ ನಾಶಕ್ಕೂ ಕೂಡ ಮುಂದಾಗಿದ್ದಾರೆಂಬ ಆತಂಕಕಾರಿ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ
ಆ ಹುಲಿಯ ಹತ್ಯೆ ಎಷ್ಟು ಭೀಕರವಾಗಿತ್ತು ಅನ್ನೊದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದೆ. ಹುಲಿಯ ದೇಹವನ್ನು ಒಂದು ಮರದ ತುಂಡಿನ ಮೇಲೆ ಇರಿಸಿ ಕೊಡಲಿಯಿಂದ ಕತ್ತರಿಸಿದ್ದಾರೆ. ಅಲ್ಲದೇ ಹುಲಿಯ ಕರುಳು ಹಾಗೂ ಲೀವರ್ ಅನ್ನೂ ಕೂಡ ಬೇರೆಡೆ ಬಿಸಾಡಿದ್ದಾರೆ. ಹಂತಕರ ಕೈಗೆ ಅಂಟಿದ್ದ ರಕ್ತವನ್ನು ಪಕ್ಕದಲ್ಲಿ ಹರಿಯುವ ನೀರಿನಲ್ಲಿ ತೊಳೆದಿದ್ದಾರೆ. ಸಂಪೂರ್ಣ ಪ್ಲ್ಯಾನ್ ಮಾಡೇ ಈ ದೈತ್ಯ ಹುಲಿಯ ಹತ್ಯೆಗೆ ಸಂಚು ಮಾಡಿದ್ದಾರೆಂಬುದು ಈ ದೃಶ್ಯಗಳಿಂದ ಗೊತ್ತಾಗ್ತಿದೆ.
ಅರಣ್ಯ ಸಚಿವರ ಆದೇಶದ ಹಿನ್ನೆಲೆ ಹುಲಿ ಹತ್ಯೆ ನಡೆದ ಸ್ಥಳಕ್ಕೆ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ಭೇಟಿ ಕೊಟ್ಟು ತನಿಖೆಗೆ ಮುಂದಾಗಿದೆ. ಗಸ್ತಿನ ಸಿಬ್ಬಂದಿ ಹಾಗೂ ಅರಣ್ಯಾಧಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ಕೊಟ್ಟು ಕೆಲವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ.
ಒಟ್ನಲ್ಲಿ ಈ ಹುಲಿ ಹತ್ಯೆಯ ಹಿಂದೆ ಅಕ್ಕಪಕ್ಕದ ಗ್ರಾಮಸ್ಥರೇ ಇದ್ದಾರೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಇಬ್ಬರು ಅಥವಾ ಮೂವರು ಭಾಗಿಯಾಗಿರುವ ಶಂಕೆ ಕೂಡ ಇದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ