ಹೈದರಾಬಾದ್: ಪ್ರಿಯಕರ ಮೋಸ ಮಾಡಿದಕ್ಕೆ ನೇಣು ಬಿಗಿದುಕೊಂಡು ಕಿರುತೆರೆ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಆಂಧ್ರ ಪ್ರದೇಶದ ಹೈದರಾಬಾದ್ನ ಶ್ರಿನಗರ ಕಾಲೋನಿಯಲ್ಲಿರುವ ಶ್ರೀ ಸಾಯಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಜಾನ್ಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ. ಜಾನ್ಸಿ ಮೂಲತಃ ಕೃಷ್ಣ ಜಿಲ್ಲೆಯವಳಾಗಿದ್ದು, ಸೂರ್ಯ ಅಲಿಯಾಸ್ ನಾನಿಯನ್ನು ಪ್ರೀತಿಸುತ್ತಿದ್ದಳು. ಜಾನ್ಸಿ, ಸೂರ್ಯನನ್ನು ಮದುವೆಯಾಗಲು ಇಷ್ಟಪಟ್ಟಿದ್ದಳು. ಆದರೆ ಇವರಿಬ್ಬರ ಮದುವೆಗೆ ಸೂರ್ಯನ ಪೋಷಕರು ವಿರೋಧಿಸಿದ್ದರು.
ಸೂರ್ಯ ಕೂಡ ಜಾನ್ಸಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಅಲ್ಲದೇ ಆತ ಜಾನ್ಸಿ ಜೊತೆ ಇರುವ ಬದಲು ಆಕೆಯಿಂದ ದೂರ ಇರುತ್ತಿದ್ದನು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಜಾನ್ಸಿಯ ಪೋಷಕರು ಆರೋಪಿಸಿದ್ದಾರೆ.
ಜಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾನ್ಸಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು.
ಜಾನ್ಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಸೂರ್ಯ ನಾಪತ್ತೆ ಆಗಿದ್ದಾನೆ. ಸದ್ಯ ಪೋಲೀಸರು ಆರೋಪಿ ಸೂರ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv