ಹಾಸನ : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಸಿಎಂ ಬೊಮ್ಮಾಯಿ ಅವರಿಗೆ ಸಂಸದೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ.
ಅರಣ್ಯ ಇಲಾಖೆಯ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಹಾಸನದ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದು ಹೂತಿದ್ದ ಆರೋಪಿಗಳು ಆನೆ ದಂತ ಮಾರಾಟ ಮಾಡುವಾಗ ಬೆಂಗಳೂರಿನಲ್ಲಿ ಸಿಕೆ ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಹಾಸನ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಆದರೆ ಕೇಸ್ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್ಎಫ್ಒ ಪ್ರಯತ್ನ ಮಾಡಿದ್ದಾರೆ. ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭ್ರಷ್ಟಾಚಾರ ಎಸಗಿದ್ದಾರೆ. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR
ಪದೇ ಪದೇ ಕೇಸ್ ಅನ್ನು ವರ್ಗಾಯಿಸಲು ಸಿಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಪ್ರಜ್ವಲ್ ರೇವಣ್ಣ ಒತ್ತಡ ಹಾಕಿದ್ದಾರೆ. ಸಿಕ್ಕಿ ಬಿದ್ದ ಆರೋಪಿಗಳು ತನ್ನ ಪಕ್ಷದ ಬೆಂಬಲಿಗರು ಎಂಬ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಒತ್ತಡ ಹಾಕಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಸಿಎಂ ಮಧ್ಯಪ್ರವೇಶ ಮಾಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಜುಲೈ 18 ರಂದು ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಕಾಡಾನೆ ಕೊಂದು ಜಮೀನಿನಲ್ಲಿ ಹೂತು ಹಾಕಿ ಬೆಂಗಳೂರಿನಲ್ಲಿ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ವೀರಾಪುರ ಗ್ರಾಮದ ಚಂದ್ರೇಗೌಡ, ತಮ್ಮಯ್ಯ, ಪಾಪಯ್ಯ ಅವರನ್ನು ಪೊಲೀಸರು ಬಂಧಿಸಿದ್ದರು. ಕರೆಂಟ್ ಶಾಕ್ ಕೊಟ್ಟು ಒಂಟಿ ಸಲಗವನ್ನು ಕೊಂದಿದ್ದಾರೆ ಎಂಬ ಆರೋಪವಿದೆ. ಜೊತೆಗೆ ಅಲ್ಲಿನ ಸ್ಥಳೀಯ ಇಬ್ಬರ ಕೈವಾಡವೂ ಇದೆ. ಆದರೆ ಆನೆ ದಂತಗಳನ್ನು ಮಾರಾಟ ಮಾಡಿದವರ ಬಂಧನ ಆಗಿದೆ. ಜಮೀನಿನಲ್ಲಿ ಕೊಂದು ಹೂತು ಹಾಕಿರುವ ಪ್ರಮುಖ ಆರೋಪಿ ಪಕ್ಷದ ಕಾರ್ಯಕರ್ತನಾಗಿರುವ ಕಾರಣ ಆತನ ರಕ್ಷಣೆಗೆ ಹಾಗೂ ಸಂಪೂರ್ಣ ಕೇಸ್ ಮುಚ್ಚಿ ಹಾಕಲು ಪ್ರಜ್ವಲ್ ರೇವಣ್ಣ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.