ಬೆಳಗಾವಿ: ಅನಧಿಕೃತವಾಗಿ ಆಮೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗಾವಿ ವಲಯ ಅರಣ್ಯಾಧಿಕಾರಿಗಳು ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ ಆರ್.ಎಫ್.ಓ ಆರ್.ಎಚ್. ಡೊಂಬರಗಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಮೆ ಕೊಳ್ಳುವವರ ಸೋಗಿನಲ್ಲಿ DRFO ವಿನಯ್ ಗೌಡರ, ರಮೇಶ್ ಗಿರಿಯಪ್ಪನವರ ಮತ್ತು ಅರಣ್ಯ ಸಿಬ್ಬಂದಿ ಮೊಹಮ್ಮದ ಕಿಲ್ಲೇದಾರ ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿ ಪ್ರತಿ ಆಮೆಗೆ 5 ಲಕ್ಷ ರೂ.ಗೆ ಅರಣ್ಯಾಧಿಕಾರಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಆರೋಪಿ ಸಹಿತ ಬೈಕ್ ಮತ್ತು ಆಮೆ ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಮೃತ ಶಿವಾಜಿ ಬೆನಕೆ(45) ಈತ ಮಹಾರಾಷ್ಟ್ರದ ಚಂದಗಡ ತಾಲೂಕಿನ ಡೆಕೊಳಿ ಗ್ರಾಮದವನಾಗಿದ್ದಾನೆ. ಸಿಸಿಎಫ್ ಪಿ.ಬಿ. ಕರುಣಾಕರ್, ಡಿಸಿಎಫ್ ಎಂ.ವಿ. ಅಮರನಾಥ್ ಹಾಗೂ ಎಸಿಎಫ್ ಎಸ್.ಎಂ.ಸಂಗೊಳ್ಳಿ ಕಾರ್ಯಚರಣೆಗೆ ಮಾರ್ಗದರ್ಶನ ನೀಡಿದರು.