ದಾವಣಗೆರೆ: ವಾಟ್ಸಪ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅನಾವಶ್ಯಕ ಚರ್ಚೆಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ದಾವಣಗೆರೆಯ ಹರಿಹರ ತಾಲೂಕಿನ ಯುವ ಸಮೂಹ ಈ ವಾಟ್ಸಪ್ ಗ್ರೂಪ್ ನಿಂದ ತುಂಗಭದ್ರ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಪಣ ತೊಟ್ಟಿದ್ದಾರೆ.
ತುಂಗಭದ್ರ ನದಿ ದಾವಣಗೆರೆಯ ಹಲವು ತಾಲೂಕುಗಳ ಜೀವನಾಡಿಯಾಗಿದ್ದು, ಹರಿಹರ ತಾಲೂಕಿನ ಪಕ್ಕದಲ್ಲೇ ತುಂಗಭದ್ರ ನದಿ ಹರಿಯುತ್ತಿದ್ದು, ನದಿಯ ಪಾತ್ರದಲ್ಲಿ ಸಾಕಷ್ಟು ಪ್ರವಾಸಿಗರು ಬಂದು ಎಂಜಾಯ್ ಮಾಡಿ ಹೋಗ್ತಾರೆ. ಆದರೆ ಅದರ ಸ್ವಚ್ಛತೆ ಬಗ್ಗೆ ಯಾರೂ ಕೂಡ ಕಾಳಜಿ ವಹಿಸುವುದಿಲ್ಲ.
ಹರಿಹರದ ಪಟ್ಟಣದ ಯುವ ಸಮೂಹ ವಾಟ್ಸಪ್ ನಲ್ಲಿ ‘ನನ್ನ ಊರು ನನ್ನ ಹೊಣೆ’ ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರ ಉದ್ದೇಶ ಕೇವಲ ಪರಿಸರ ಜಾಗೃತಿ ಹಾಗೂ ಪರಿಸರ ಸ್ವಚ್ಛತೆ ಎಂಬ ಧ್ಯೇಯ. ತಮ್ಮ ಸ್ನೇಹಿತರನ್ನು ಆ ಗ್ರೂಪ್ನಲ್ಲಿ ಸೇರ್ಪಡೆ ಮಾಡಿ ವಾರಕ್ಕೆ ಒಮ್ಮೆ ನದಿಯ ಪಾತ್ರದಲ್ಲಿ ಇರುವ ಕಸವನ್ನು ಸ್ವಚ್ಛ ಮಾಡುವುದಕ್ಕೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.
ಈಗ ಸಂಕ್ರಾಂತಿ ಹಬ್ಬ ಕೂಡ ಹತ್ತಿರ ಬಂದಿದೆ. ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಪುಣ್ಯಸ್ನಾನ, ಪೂಜೆ ಮಾಡುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಮಕರ ಸಂಕ್ರಾಂತಿಗೆ ಪುಣ್ಯಸ್ನಾನ ಹಾಗೂ ಪೂಜೆಗೆಂದು ಸಾವಿರಾರು ಭಕ್ತರು ಹರಿಹರದ ತುಂಗಭದ್ರಾ ದಂಡೆಯಲ್ಲಿ ಸೇರುತ್ತಾರೆ. ಆ ಸಂದರ್ಭದಲ್ಲಿ ನದಿ ಪಾತ್ರ ಸ್ವಚ್ಛವಾಗಿರಬೇಕಂಬ ಸಂಕಲ್ಪದಿಂದ ನದಿ ಪಾತ್ರ ಸ್ವಚ್ಛತೆ ಆಂದೋಲನ ಆರಂಭಿಸಿದ್ದಾರೆ. ವಾರಕ್ಕೆ ಒಮ್ಮೆ ಬೆಳಗ್ಗೆ ನದಿಪಾತ್ರ ಸ್ವಚ್ಛತೆ ಗ್ರೂಪ್ನಲ್ಲಿಂದ ಸದಸ್ಯರು ಮಾತ್ರವಲ್ಲದೇ, ನಗರದ ಜನಪ್ರತಿನಿಧಿಗಳು, ನಾಗರಿಕರು, ಮಹಿಳೆಯರು, ಮಕ್ಕಳು ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.