ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ನದಿ ಸಂಪೂರ್ಣ ಬತ್ತಿದ್ದು ಜಲಚರಗಳಿಗೆ ಕುತ್ತು ಬಂದಿದೆ. ಭೀಕರ ಬರದಿಂದ ಬತ್ತಿದ ತುಂಗಾಭದ್ರಾ ನದಿಯಲ್ಲಿನ ಮೀನು ಸೇರಿದಂತೆ ಅನೇಕ ಜಲಚರಗಳು ಸಾವನ್ನಪ್ಪುತ್ತಿವೆ.
ಜಿಲ್ಲೆಯ ಗಂಗಾವತಿ ತಾಲೂಕಿನ ನಂದಿಹಳ್ಳಿ ಗ್ರಾಮದ ಜಲಾನಯನ ಪ್ರದೇಶದಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಮೀನು ಹಿಡಿಯುವುದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ನದಿಯಲ್ಲಿ ಮೀನಿಲ್ಲದೇ ಜೀವನ ಹೇಗಪ್ಪ ನಡೆಸೋದು ಎಂದು ಪರದಾಡುವಂತಾಗಿದೆ.
ಕಳೆದ ಬೇಸಿಗೆಯಲ್ಲಿ ನದಿಯಲ್ಲಿ ಅಲ್ಪ ಸ್ವಲ್ಪ ನೀರಿತ್ತು. ಆದರೆ ಈ ಬಾರಿ ಬೇಸಿಗೆಯ ಮುನ್ನವೇ ನದಿಯಲ್ಲಿ ನೀರು ಬತ್ತಿ ಹೋಗಿದೆ. ಕೆಲ ಮೀನುಗಾರರು ಸತ್ತ ಮೀನುಗಳನ್ನೇ ಹಿಡಿದು ತಂದು ಮಾರಾಟ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಮೀನು ತಿನ್ನುವರಿಗೆ ವಿವಿಧ ಕಾಯಿಲೆಗಳು ಬರುವ ಆತಂಕವೂ ಇದೆ. ಇಷ್ಟೇ ಅಲ್ಲದೇ ನದಿ ದಡದಲ್ಲಿ ಸತ್ತು ಬೀಳುವ ಮೀನುಗಳಿಂದ ಜಲಾನಯನ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ದುರ್ನಾತ ಹೆಚ್ಚಿದೆ.