ರಾಯಚೂರು: ಬರಗಾಲ ಹಿನ್ನೆಲೆ ಜಿಲ್ಲೆಗೆ ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಟಿಎಲ್ಬಿಸಿ ಗೆ ಇಂದು ನೀರು ಹರಿಸಲಾಗಿದೆ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಏಪ್ರಿಲ್ 10 ರಿಂದ 20 ರವರೆಗೆ 0.9 ಟಿಎಂಸಿ ನೀರನ್ನ ಹರಿಸಲಾಗುತ್ತಿದೆ. ಈ ಹಿನ್ನೆಲೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರನ್ನ ಕದಿಯುವ ಸಾಧ್ಯತೆಯಿದ್ದು ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಡಿಎಆರ್ ತುಕಡಿ ಹಾಗೂ 100 ಜನ ಗ್ಯಾಂಗ್ ಮನ್ಗಳಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜನ ಜಾನುವಾರುಗಳಿಗೆ ಕುಡಿಯುವ ನೀರನ್ನ ಒದಗಿಸುವ ಉದ್ದೇಶದಿಂದ ದೇವದುರ್ಗದ ಗಣೇಕಲ್ ಜಲಾಶಯ, ಸ್ಥಳೀಯ ಸಂಸ್ಥೆಗಳ ಮತ್ತು ಖಾಸಗಿ ಕೆರೆಗಳು ಹಾಗೂ ಜಿಲ್ಲಾ ಪಂಚಾಯ್ತಿಯ 267 ಕೆರೆಗಳನ್ನ ತುಂಬುವ ಉದ್ದೇಶ ಹೊಂದಲಾಗಿದೆ. ನೀರಿನ ಸಮರ್ಪಕ ಪೂರೈಕೆಗೆ ನೋಡಲ್ ಅಧಿಕಾರಿಗಳು, ಜಿಪಂ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ತಂಡ ರಚಿಸಿದ್ದು ನೀರಿನ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲಾಗಿದೆ ಅಂತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ 6 ಗಂಟೆಗೆ ಜಲಾಶಯದಿಂದ ನೀರನ್ನ ಬಿಡಲಾಗಿದ್ದು, ಕಾಲುವೆ ಆಶ್ರಿತ ಕೆರೆಗಳಿಗೆ ತಲುಪಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ. ಬೆಳೆಗಳಿಗೆ ಬಳಸದಂತೆ ಕೇವಲ ಕುಡಿಯುವ ನೀರಿನ ಅವಶ್ಯಕತೆಗೆ ಅನುಗುಣವಾಗಿ ಕಾಲುವೆಗೆ ನೀರನ್ನ ಹರಿಸಲಾಗುತ್ತಿದೆ.