ತುಮಕೂರು: ಜಿಲ್ಲೆಯ ಶಿರಾ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದೀಗ ಕ್ಷೇತ್ರದ ಜನರ ನೋವಿಗೆ ಶಾಸಕ ಸತ್ಯನಾರಾಯಣ ಅವರು ಸ್ಪಂದಿಸಿದ್ದಾರೆ.
ಅಪಘಾತ ನಡೆದ ಬಳಿಕ ಕ್ಷೇತ್ರದ ಜನರು ದೇವನಹಳ್ಳಿ ಬಳಿಯ ರೆಸಾರ್ಟ್ ನಲ್ಲಿ ವಾಸ್ತವ್ಯವಿದ್ದ ಶಾಸಕರಿಗೆ ಮಾಹಿತಿ ರವಾನಿಸಿದ್ದಾರೆ. ಈ ಕೂಡಲೇ ಬೆಂಗಳೂರಿನ ರೆಸಾರ್ಟ್ ನಲ್ಲಿದ್ದ ಶಾಸಕರು ಶಿರಾಕ್ಕೆ ಹೊರಟೇ ಬಿಟ್ಟಿದ್ದಾರೆ. ಸಂಜೆ ಬರುವುದಾಗಿ ಹೇಳಿ ರೆಸಾರ್ಟ್ ನಿಂದ ಕ್ಷೇತ್ರದ ಜನರತ್ತ ತೆರಳಿದ್ದಾರೆ.
ಶಿರಾ ಬಳಿ ನಡೆದ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು, ಅವರನ್ನು ನೋಡಲೆಂದು ತುಮಕೂರು ಆಸ್ಪತ್ರೆಗೆ ತೆರಳುತ್ತಿದ್ದೇನೆ ಅಂತ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ದೇವರ ದರ್ಶನ ಮುಗಿಸಿ ಬರೋವಾಗ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ- 7 ಮಂದಿಯ ದುರ್ಮರಣ
ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಕೊನೆಗೂ ಸಿಎಂ ಸ್ಥಾನವನ್ನು ಅಲಂಕರಿಸಿದ್ದ ಬಿಎಎಸ್ವೈ ರಾಜೀನಾಮೆ ನೀಡಿ ಎಚ್ಡಿ ಕುಮಾರಸ್ವಾಮಿಯವರು ಆ ಸ್ಥಾನವನ್ನು ಅಲಂಕರಿಸಲು ಸಿದ್ಧರಾಗುವಲ್ಲಿ ಅಂತ್ಯ ಕಂಡಿದೆ. ಬುಧವಾರ ಎಚ್ಡಿಕೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರೋ ಹಿರಿಯ ನಾಯಕರನ್ನು ಆಹ್ವಾನಿಸಲು ತೆರಳಿದ್ದಾರೆ.
ಇತ್ತ ಆಪರೇಷನ್ ಕಮಲದ ಭೀತಿಯಿಂದ ಜೆಡಿಎಸ್ ನಾಯಕರೂ ಇನ್ನೂ ರೆಸಾರ್ಟ್ ರಾಜಕೀಯ ಮುಂದುವರೆಸಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈವರೆಗೂ ಎಚ್ಡಿಕೆ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆದಿಲ್ಲ. ಹೀಗಾಗಿ ಯಾರು ಯಾರಿಗೆ ಯಾವ ಯಾವ ಖಾತೆ ಸಿಗಲಿದೆ ಎಂಬುದು ಸದ್ಯದ ಕುತೂಹಲ.