ತುಮಕೂರು: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಪರಂ ಮಾತಿಗೆ ಹಾಲಿ ಸಂಸದರು ಒಪ್ಪಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಹೌದು. ಮುದ್ದಹನುಮೇಗೌಡ ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಅಲ್ಲದೆ ಈ ಬಗ್ಗೆ ಇಂದು ನಾಮಪತ್ರ ಕೂಡ ಸಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಈ ಮಧ್ಯೆ ಡಿಸಿಎಂ ಅವರು ಭಾನುವಾರ ತಡರಾತ್ರಿ ಮುದ್ದಹನುಮೇಗೌಡ ಅವರಿಗೆ ಪೋನ್ ಕರೆ ಮಾಡಿ ಮನವೊಲಿಕೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ನಿಮ್ಮ ಅಸಮಾಧಾನ ಬಿಟ್ಟುಬಿಡಿ ನಮ್ಮ ಜೊತೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಪರಮೇಶ್ವರ್ ಮನವೊಲಿಕೆಗೆ ಪಟ್ಟು ಬಿಡದ ಮುದ್ದುಹನುಮೇಗೌಡ, ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ಏನ್ ಮಾಡ್ಕೊತ್ತೀರಾ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ನಡೆದ ಹೆಬ್ಬೂರಿನ ತೋಟದ ಮನೆಯಲ್ಲಿ ಕಾರ್ಯಕರ್ತರ ಜೊತೆ ಮುದ್ದಹನುಮೇಗೌಡ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ಮಾತನಾಡಿದ ಗೌಡರು, ನನಗಾಗಿ ಅನೇಕ ಹೃದಯಗಳು ಮಿಡಿದಿವೆ. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತಿದ್ದೇನೆ. 30 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾನು 10 ದಿನಗಳ ಹಿಂದೆ ಈ ಸಭೆ ನಡೆಸುತ್ತೇನೆ ಎಂಬ ಅರಿವಿರಲಿಲ್ಲ. ನೀತಿ ಸಂಹಿತೆ ಜಾರಿಗೆ ಬರುವವರೆಗೂ ಲೋಕಸಭೆ ಸದಸ್ಯನಾಗಿ ಕೆಲಸ ಮಾಡಿದೆ. ಒಂದೇ ಒಂದು ಕಾರಣ ಹೇಳಿಲ್ಲ. ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಇನ್ನೂ ಕಾಲ ಮಿಂಚಿಲ್ಲ. ಒಂದು ಅವಕಾಶ ಕೊಡಿ. ನನಗೆ ಟಿಕೆಟ್ ಕೊಟ್ರೆ ಇತಿಹಾಸ ಸೃಷ್ಟಿಯಾಗುತ್ತದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಜನರ ನ್ಯಾಯಾಲಯದಲ್ಲಿ ಹೋಗುತ್ತೇನೆ. ಸೀಟ್ ಗೋಸ್ಕರ ಅಂಗಲಾಚುವ ಪರಿಸ್ಥಿತಿ ಬರಲಿದೆ ಅಂದು ನಿರೀಕ್ಷೆ ಮಾಡಿಲ್ಲ. ಯಾರ ಬಗ್ಗೆನೂ ಟೀಕೆ ಮಾಡಿಲ್ಲ. ಮನವಿ ಮಾಡಿದ್ದೇನೆ ಅಷ್ಟೆ ಎಂದು ಹೇಳಿದ್ದರು.
ಇದೇ ವೇಳೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ರು. ಅಯ್ಯಯ್ಯೊ ಅನ್ಯಾಯ.. ನ್ಯಾಯ ಬೇಕು ಎಂದು ಘೋಷಣೆ ಮಾಡಿದ್ದರು. ಸ್ಪರ್ಧೆ ಮಾಡದೇ ಇದ್ದರೆ ವಿಷ ಕುಡಿಯುವುದಾಗಿ ಅಭಿಮಾನಿಗಳಿಂದ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಿಂದಾಗಿ ಮುದ್ದಹನುಮೇಗೌಡರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಂಡಾಯ ಜೋರಾಗಿದೆ.