ತುಮಕೂರು: ನನ್ನದು ಮತ್ತು ನನ್ನ ಮಗ ರಾಜೇಂದ್ರನ ಫೋನ್ ಕೂಡ ಕದ್ದಾಲಿಕೆ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ನಗದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ನಮ್ಮ ಕುಟುಂಬದ ಫೋನ್ ಕೂಡ ಟ್ಯಾಪಿಂಗ್ ಆಗಿದೆ. ಟ್ಯಾಪಿಂಗ್ ವಿಚಾರ ನನಗೆ ಮೊದಲೇ ಗೊತ್ತಿತ್ತು. ಆದರೆ ಸೂಕ್ತ ದಾಖಲೆ ಇಲ್ಲದಿರುವ ಕಾರಣ ನಾನು ದೂರು ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಸಿಬಿಐಗೆ ನೀಡಿರುವುದು ಸ್ವಾಗತಾರ್ಹ ನಡೆ. ಟೆಲಿಫೋನ್ ಕದ್ದಾಲಿಕೆ ಅಂತ್ಯ ಆಗಬೇಕಾದರೆ ಸಿಬಿಐ ತನಿಖೆ ಸೂಕ್ತವಾದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಟೆಲಿಫೋನ್ ಕದ್ದಾಲಿಕೆಯಿಂದ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ. ಕುಮಾರಸ್ವಾಮಿ ಒಬ್ಬ ಲಜ್ಜೆಗೆಟ್ಟ ಮಾಜಿ ಮುಖ್ಯಮಂತ್ರಿ. ಅಂಥವರನ್ನು ಈ ದೇಶದಲ್ಲಿ ಮುಖ್ಯಮಂತ್ರಿಯಾಗಿ ಕಂಡಿದ್ದು ದುರ್ದೈವ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಆ ಮಟ್ಟದಲ್ಲಿ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.