ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವೀಶ್ ಅವರ ಮನೆಗೆ ಕಳ್ಳರು ಕನ್ನ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ನಗರದ ಗೋಕುಲ ಬಣಾವೆಯಲ್ಲಿ ಇರುವ ಲತಾ ರವೀಶ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಕಳ್ಳರು ನುಗ್ಗಿದ್ದಾರೆ. ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಶಿವರಾತ್ರಿ ಹಬ್ಬದ ನಿಮಿತ್ತ ಫೆ.20 ರಂದು ಲತಾ ಮನೆಯವರೆಲ್ಲ ಬೆಂಗಳೂರಿಗೆ ಹೋಗಿದ್ದರು. ಇದನ್ನು ಅರಿತ ಕಳ್ಳರು ರಾತ್ರಿ ವೇಳೆ ಮನೆಗೆ ನುಗ್ಗಿ ದೋಚಿದ್ದಾರೆ. ನಿನ್ನೆ ರಾತ್ರಿ ಮನೆಗೆ ವಾಪಸ್ಸಾದಾಗ ಲತಾ ರವೀಶ್ ಅವರಿಗೆ ಘಟನೆ ಬಗ್ಗೆ ತಿಳಿದಿದೆ. ತಕ್ಷಣವೇ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.