ತುಮಕೂರು: ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಯೋರ್ವಳು ನಿಗೂಢವಾಗಿ ಕೊಲೆಯಾದ ಘಟನೆ ತುಮಕೂರು ತಾಲೂಕಿನ ಊರ್ಡಿಗೆರೆ ಗ್ರಾಮದ ದೊಡ್ಡ ತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ.
ಮೃತ ಪಟ್ಟ ಮಹಿಳೆಯನ್ನು 33 ವರ್ಷದ ಸೌಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸೌದೆ ತರಲು ಕಾಡಿಗೆ ಹೋದ ಸೌಭಾಗ್ಯಮ್ಮಳ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕಾಡಿಗೆ ಹೋಗಿ ಸೌದೆ ತೆಗೆದುಕೊಂಡು ವಾಪಾಸ್ ಬರುತ್ತಿರುವಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ಕೊಲೆ ಯಾವ ಕಾರಣಕ್ಕೆ ಆಗಿದೆ ಮತ್ತು ಯಾರಿಂದ ನಡೆದಿದೆ ಎಂಬುದರ ಬಗ್ಗೆ ಶೋಧ ನಡೆಸುತ್ತಿದ್ದಾರೆ.