– ದೊರೆ ಸ್ವಾಮಿ ತುರ್ತುಪರಿಸ್ಥಿತಿಯಲ್ಲಿ ಎಲ್ಲೂ ಕಾಣ್ತಿರಲಿಲ್ಲ
ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ದೊಡ್ಡ ಮನುಷ್ಯ ಅಂದುಕೊಂಡರೆ ಅದು ತಪ್ಪು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಏಕವಚನದಲ್ಲಿಯೇ ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರು? ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಎಲ್ಲಿ ಬಿದ್ದಿದ್ದ ಇವನು? ವಾಕ್ ಸ್ವಾತಂತ್ರ್ಯ ಇಲ್ದಾಗ ಸಿದ್ದರಾಮಯ್ಯ ಎಲ್ಲೋಗಿದ್ದ? ಅವನು ಮಹಾನ್ ಮೇದಾವಿ, ಅಪ್ಪಿತಪ್ಪಿ ಕನಕದಾಸನ ಮಹಾನುಭಾವನ ಜಾತಿಯಲ್ಲಿ ಹುಟ್ಟಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯನನ್ನ ದೊಡ್ಡ ಮನುಷ್ಯ ಅಂದುಕೊಂಡದ್ದರೆ ಅದು ತಪ್ಪು. ನಾನು ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತೇನೆ ಅಂತಾನೆ. ಅದೇ ಮಾಂಸ ತಿಂದು ಮಸೀದಿಗೋದರೆ ಖೈಮಾ ಮಾಡುತ್ತಾರೆ ಎಂದರು. 1995 ರಲ್ಲಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯಿಂದ ಇಡೀ ದೇಶದ ಪ್ರಜಾಪ್ರಭುತ್ವಕ್ಕೇ ಅಪಾಯ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಕೇವಲ 28 ವರ್ಷದಲ್ಲಿ ದೇಶ ಅಷ್ಟೊಂದು ಗಂಡಾಂತರಕ್ಕೆ ಸಿಲುಕುತ್ತದೆ ಎಂದೂ ಯಾರೂ ಊಹಿಸಿರಲಿಲ್ಲ ಎಂದು ತಿಳಿಸಿದರು.
ದೇಶದ ಪ್ರಜಾಪ್ರಭುತ್ವ ಬಗ್ಗೆ ಕಾಳಜಿ, ಭಕ್ತಿ ಇದ್ದವರು ತುರ್ತುಸ್ಥಿತಿ ವಿರುದ್ಧ ಹೋರಾಡಿ ಜೈಲಿಗೆ ಹೋಗಿದ್ದಾರೆ. ನಾನೂ ಕೂಡ ಒಂದುವರೆ ವರ್ಷ ಜೈಲಿನಲ್ಲಿದ್ದೆ. ತುರ್ತುಪರಿಸ್ಥಿತಿಯ ಹೋರಾಟವೂ ಸ್ವಾತಂತ್ರ್ಯ ಹೋರಾಟದಂತೆ ಇತ್ತು. ಈ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎನಿಸಿಕೊಳ್ಳುವ ದೊರೆ ಸ್ವಾಮಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಪಾಪ ದೊರೆ ಸ್ವಾಮಿ ವಯಸ್ಸಾದವರು ಎಲ್ಲೋ ಒಂದು ಕಡೆ ಮೂಲೆಯಲ್ಲಿ ಇದ್ರೆನೋ ಎಂದು ಟಾಂಗ್ ಕೊಟ್ಟಿದ್ದಾರೆ.
ಅಲ್ಲದೇ ತುರ್ತುಪರಿಸ್ಥಿತಿಯಲ್ಲಿ ಹೋರಾಟ ಮಾಡದ ದೊರೆಸ್ವಾಮಿ, ಇಂದಿರಾಗಾಂಧಿ ಪರ ಮತ್ತು ಕಾಂಗ್ರೆಸ್ ಪರವಾಗಿಯೇ ಇದ್ದರು ಎಂದು ಪರೋಕ್ಷವಾಗಿ ಕುಟುಕಿದ್ದಾರೆ. ಪಾಪಿ ಕಾಂಗ್ರೆಸ್ ನವರು ಅವರನ್ನು ಕುಣಿಸುತ್ತಿದ್ದಾರೆ. ಜೆಪಿ ಮೂಮೆಂಟ್ ನಲ್ಲಿ ಇವರು ಯಾರೂ ಇರಲಿಲ್ಲ ಎಂದು ಸೊಗಡು ಗುಡುಗಿದ್ದಾರೆ.
ಕೇವಲ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಇವರು ನಮಗೆ ಸ್ವಾತಂತ್ರ ತಂದುಕೊಟ್ಟಿದ್ದಾ? ಇವರೆಲ್ಲಾ ಮೀರ್ ಸಾಧಕರು, ಕಾಂಗ್ರೆಸ್ ಹೆಸರು ಹೇಳ್ಕೊಂಡು ಬದುಕುತ್ತಿರುವ ಜನ ಎಂದು ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ದೇಶದ್ರೋಹಿ ಇಬ್ಬರು ಹೆಣ್ಣುಮಕ್ಕಳಿಗೆ ಸಪೋರ್ಟ್ ಮಾಡುವ ಇವರನ್ನು ಏನನ್ನಬೇಕು. ಇಂಥವರನ್ನು ಮುಂದೆ ಇಟ್ಟಿಕೊಂಡಿರುವುದಕ್ಕೆ ದೊರೆಸ್ವಾಮಿ ಮೇಲೆ ಯತ್ನಾಳ್ಗೆ ಕೋಪ ಬಂದು ಈ ರೀತಿ ಹೇಳಿದ್ದಾರೆ ಎಂದು ಯತ್ನಾಳರನ್ನು ಸಮರ್ಥಿಸಿಕೊಂಡಿದ್ದಾರೆ.