ತುಮಕೂರು: ಕುಡಿದ ಮತ್ತಿನಲ್ಲಿದ್ದ ರೌಡಿ ಶೀಟರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ತುಮಕೂರಿನ ಬೆಳಗುಂಬದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೋಹನ್ ಕುಮಾರ್ ಅಲಿಯಾಸ್ ಚಟ್ಟ ಕುಮಾರ್ ಮೃತ ರೌಡಿಶೀಟರ್. ಮೋಹನ್ ಕುಮಾರ್ ಹಾಗೂ ಆತನ ಸ್ನೇಹಿತ ಟೆಂಪರ್ ರಾಜಾ ಹನುಮಂತರಪುರದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ನಂತರ ಇಬ್ಬರೂ ಬೈಕ್ ನಲ್ಲಿ ಬೆಳಗುಂಬ ಬಸ್ ಸ್ಟಾಪ್ ಗೆ ತೆರಳಿದ್ದಾರೆ.
ಬಸ್ ನಿಲ್ದಾಣದ ಬಳಿ ಮಾತಿಗೆ ಮಾತು ಬೆಳೆದಿದೆ. ಚಟ್ಟ ಕುಮಾರ್ ಮೊದಲು ಟೆಂಪರ್ ರಾಜಾನ ಕೆನ್ನೆಗೆ ಏಟು ಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಾಜ ಅಲ್ಲಿಯೇ ಪಕ್ಕದಲ್ಲಿದ್ದ ಕಲ್ಲು ಎತ್ತಿಹಾಕಿ ಮೋಹನ್ ಕುಮಾರನ ಕೊಲೆ ಮಾಡಿದ್ದಾನೆ.
ಮೃತ ಮೋಹನ್ ಕುಮಾರ್ 3 ಕೊಲೆ ಪ್ರಕರಣ, ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಕೊಲೆ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.