ತುಮಕೂರು: ಪಡಿತರ ತರಲು ಸೊಸೈಟಿಗೆ ಹೋಗಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಾವಗಡ ತಾಲೂಕಿನ ವಡ್ರೇವು ಗ್ರಾಮದಲ್ಲಿ ನಡೆದಿದೆ.
ಹಳೆ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಡ್ರೇವು ಗ್ರಾಮದ ಗಂಗಾಧರ್ (40) ಕೊಲೆಯಾದ ವ್ಯಕ್ತಿ. ಈತ ಬೆಳಗ್ಗೆ ಗ್ರಾಮದ ಸೊಸೈಟಿಗೆ ತೆರಳಿ ಪಡಿತರ ತರುವಂತಹ ಸಂದರ್ಭದಲ್ಲಿ ಪಾತಕಿಗಳು ಮಚ್ಚಿನಿಂದ ತಲೆ ಕಾಲು ಕೈಗೆ ಹೊಡೆದಿದ್ದಾರೆ. ಈ ಪರಿಣಾಮ ಸ್ಥಳದಲ್ಲೇ ಗಂಗಾಧರ್ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ದುಷ್ಕರ್ಮಿಗಳು ನಂತರ ಆತನ ಮೃತದೇಹವನ್ನು ಗಂಗಾಧರ್ ಮನೆಯ ಎದುರು ತಂದು ಎಸೆದು ಹೋಗಿದ್ದಾರೆ. ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.