ತುಮಕೂರು: ಲಾಕ್ಡೌನ್ನಿಂದಾಗಿ ಸಂಬಂಧಿಕರು ಮೃತಪಟ್ಟರೂ ಅಂತ್ಯಸಂಸ್ಕಾರ ಮಾಡಲು ಹೋಗದ ಪರಿಸ್ಥಿತಿ ಇದೆ. ಈ ರೀತಿ ಇರುವಾಗ ದೂರದ ಊರಿನಲ್ಲಿದ್ದ ಸಂಬಂಧಿಕರು ಮೃತಪಟ್ಟ ತಮ್ಮ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ನೋಡಿ ದೂರದಿಂದಲೇ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಅಂದಹಾಗೆ ಈ ಘಟನೆ ನಡೆದದ್ದು ತುಮಕೂರು ನಗರದಲ್ಲಿ. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಕನೈದಾಸ್ ಮೃತಪಟ್ಟಿದ್ದ. ತುಮಕೂರಿನ ಎಂ.ಜಿ ರಸ್ತೆಯಲ್ಲಿ ಕರವಸ್ತ್ರ ಮಾರಿಕೊಂಡು ಜೀವನ ನಡೆಸುತ್ತಿದ್ದ ಕನೈದಾಸ್ಗೆ ಏಪ್ರಿಲ್ 2ರಂದು ಹೃದಯಾಘಾತ ಸಂಭವಿಸಿತ್ತು. ಕನೈದಾಸ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಸದ್ಯ ಲಾಕ್ಡೌನ್ ಇರುವ ಕಾರಣ ಮೃತ ಶರೀರವನ್ನು ಪಶ್ಚಿಮ ಬಂಗಾಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಕುಟುಂಬಸ್ಥರ ಮನವಿ ಮೇರೆಗೆ ಇಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ಆತನ ಸಂಬಂಧಿಕರು ಬಂದಿರಲಿಲ್ಲ. ಹಾಗಾಗಿ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಸಂಬಂಧಿಕರು ಮೃತದೇಹವನ್ನು ವೀಕ್ಷಣೆ ಮಾಡಿದ್ದಾರೆ.