ತುಮಕೂರು: ಸಾವು ಎಂಥವರನ್ನೂ ಕಣ್ಣೀರು ತರಿಸುತ್ತದೆ. ಸಾವನ್ನಪ್ಪಿದವನು ಎಷ್ಟೇ ವಿರೋಧಿಯಾಗಿರಲಿ ಅಥವಾ ಪರಿಚಯ ಇಲ್ಲದವನೇ ಆಗಿರಲಿ. ಆದ್ರೆ ಆತನ ಮೃತದೇಹವನ್ನು ನೋಡಿದರೆ ಎಂಥವರಿಗೂ ಒಂದು ಬಾರಿ ಕಣ್ಣೀರು ಬರದೇ ಇರದು. ಹಾಗೆಯೇ ಕುಣಿಗಲ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಕಂಡು ಮಹಿಳಾ ಪೊಲೀಸೊಬ್ಬರು ಕಣ್ಣೀರು ಹಾಕಿದ್ದಾರೆ.
ಕಣ್ಣೀರು ಹಾಕಿದ ಮಹಿಳಾ ಪೊಲೀಸ್ ಗೆ ಅವರು ಯಾರು, ಎಲ್ಲಿಯವರೂ ಎಂಬೂದು ಗೊತ್ತಿರಲಿಲ್ಲವೇನು. ಆದರೂ ಅಲ್ಲಿಯ ದಯನೀಯ ಸ್ಥಿತಿ ಕಂಡು ಮರುಗಿದ್ದಾರೆ. ಅಪಘಾತದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಮೃತದೇಹಗಳನ್ನು ಕಂಡು ಮಹಿಳಾ ಪೊಲೀಸ್ ಅವರ ದುಃಖದ ಕಟ್ಟೆಯೊಡೆದಿದೆ.
ಹೌದು. ತುಮಕೂರಿನ ಕುಣಿಗಲ್ ತಾಲೂಕಿನ ಬ್ಯಾಲದ ಕೆರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕು ಆಸ್ಪತ್ರೆಯಲ್ಲಿದ್ದ ಮಕ್ಕಳ ಮೃತದೇಹಗಳನ್ನ ನೋಡಿ ಮಹಿಳಾ ಪೋಲಿಸ್ ಪೇದೆಯೊಬ್ಬರು ಕಣ್ಣೀರು ಸುರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಣ್ಣೀರು ತರಿಸುವಂತಿದೆ.
ಘಟನೆಯ ಬಗ್ಗೆ ಮೃತ ಮಂಜುನಾಥ್ ಕುಟುಂಬಸ್ಥರು ಮಾತನಾಡಿ, ಮಂಜುನಾಥ್ ಅವರ ಮಗುವಿಗೆ ಮುಡಿ ಕೊಡಲು ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ ರಾತ್ರಿ ಕುಣಿಗಲ್ ಬಳಿ ದುರ್ಘಟನೆ ಸಂಭವಿಸಿದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ನಡೆದಿದ್ದೇನು?
ಧರ್ಮಸ್ಥಳ ಮಂಜುನಾಥನ ದರ್ಶನ ವಾಪಸ್ಸಾಗ್ತಿದ್ದ ತಮಿಳುನಾಡಿನ ಟವೆರಾ ವಾಹನಕ್ಕೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬ್ರೀಜಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸದಲ್ಲೇ ರಸ್ತೆಗೆ ಬಂದು ಬಳಿಕ ಟವೇರಾ ಕಾರಿಗೆ ಡಿಕ್ಕಿಯಾಗಿದೆ. ಟವೇರಾ ಕಾರಿನಲ್ಲಿದ್ದ ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ 10 ಜನರು ಸಾವನಪ್ಪಿದ್ದಾರೆ. ಮಂಜುನಾಥ್ ಎಂಬವರ ಕುಟುಂಬದ 8 ಜನರು ಸಾವನಪ್ಪಿದ್ದಾರೆ. ಅದರಲ್ಲಿ ಮಂಜುನಾಥ್ ಅವರ ಒಂದೂವರೆ ವರ್ಷದ ಹಾಗೂ ನಾಲ್ಕು ವರ್ಷದ ಮಗುವೂ ಅಸುನೀಗಿದ್ದು ಕರುಣಾಜನಕವಾಗಿತ್ತು.
ಬ್ರೀಜಾ ಕಾರಿನಲ್ಲಿನದ್ದ ನಾಲ್ವರು ಬೆಂಗಳೂರಿನ ರಾಮೋನಹಳ್ಳಿಯವರಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಕಾಲು ಮುರಿದು ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮೋಹಳ್ಳಿಯ ಲಕ್ಷ್ಮೀಕಾಂತ್, ಸಂದೀಪ್, ಮಧು ಮೃತ ದುರ್ದೈವಿಗಳಾಗಿದ್ದು. ತಮಿಳುನಾಡಿನ ಕೃಷ್ಣಗಿರಿಯ ಸೂಳೆಗಿರಿಯ ಮಂಜುನಾಥ್, ತನುಜ, ಗೌರಮ್ಮ, ರತ್ನಮ್ಮ, ಸೌಂದರರಾಜ್, ರಾಜೇಂದ್ರ, ಸರಳ, ಪ್ರಶನ್ಯಾ, ಮಾಲಾಶ್ರೀ ಎಂಬುದಾಗಿ ತಿಳಿದುಬಂದಿದೆ.
ಟವೆರಾದಲ್ಲಿ ಒಟ್ಟು 13 ಜನರು ಪ್ರಯಾಣಿಸುತ್ತಿದ್ದು ಅದರಲ್ಲಿ 10 ಜನ ಸಾವನಪ್ಪಿದ್ದಾರೆ. ಉಳಿದ ಮೂವರು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.