ತುಮಕೂರು: ಗುಬ್ಬಿ ತಾಲೂಕಿನ ನಾರನಹಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಣೆ ಮಾಡಲಾಗಿದೆ.
ಕುರಿ, ಮೇಕೆಗಳನ್ನು ತಿಂದು ಕಳೆದೊಂದು ವಾರದಿಂದ ಚಿರತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಮಂಗಳವಾರ ಚಿರತೆ ಬೆಟ್ಟೆಗೌಡ ಎಂಬವರ ತೋಟದ ಬಾವಿಗೆ ಬಿದ್ದಿತ್ತು. ಕೂಡಲೇ ತೋಟದ ಮಾಲೀಕ ಬೆಟ್ಟೇಗೌಡ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದು ಆಗಮಿಸಿದ ಸಿಬ್ಬಂದಿ ಚಿರತೆಗೆ ಅರವಳಿಕೆ ಕೊಟ್ಟು ಯಶಸ್ವಿಯಾಗಿ ಹಿಡಿದಿದ್ದಾರೆ. ಬಾವಿಗೆ ಬಿದ್ದ ಚಿರತೆಯನ್ನು ನೋಡಲು ಗ್ರಾಮಸ್ಥರೆಲ್ಲ ಬೆಟ್ಟೇಗೌಡರ ತೋಟಕ್ಕೆ ಆಗಮಿಸಿದ್ದರು.
ಜೂನ್ ನಲ್ಲಿ ಕೊರಟೆಗೆರೆ ತಾಲೂಕಿನ ತಂಬಾಡಿ ಗ್ರಾಮದಲ್ಲಿ ಚಿರತೆಯೊಂದು ಕೋಳಿ ಫಾರಂ ಮೇಲೆ ದಾಳಿ ನಡೆಸಿ, 150ಕ್ಕೂ ಹೆಚ್ಚು ಕೋಳಿಗಳನ್ನು ತಿಂದಿತ್ತು. ಕೂಡಲೇ ಗ್ರಾಮಸ್ಥರು ಚಿರತೆಯನ್ನು ಕೋಳಿ ಫಾರಂನಲ್ಲಿಯೇ ಕೂಡಿ ಹಾಕಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದರು.