– ಸುಟ್ಟು ಕರಕಲಾಯ್ತು ಟಿ.ಟಿ.ವ್ಯಾನ್
ಮಡಿಕೇರಿ: ಕೇರಳದಿಂದ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಟಿ.ಟಿ.ವ್ಯಾನ್ ಬೆಂಕಿಗೆ ಆಹುತಿಯಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕನ ಮುಂಜಾಗ್ರತೆಯಿಂದಾಗಿ ಭಾರೀ ಅನಾಹುತ ಕೈತಪ್ಪಿದೆ.
ಈ ಅನಾಹುತದಿಂದ ವ್ಯಾನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ 14 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಇದನ್ನು ಓದಿ: ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ
ಆಗಿದ್ದೇನು?:
ಕೇರಳ ನೋಂದಣಿ ಹೊಂದಿರುವ ಟಿ.ಟಿ.ವ್ಯಾನ್ ಕಾಸರಗೋಡಿನಿಂದ ಮಡಿಕೇರಿಗೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊರಟಿತ್ತು. ಈ ವೇಳೆ ಜೋಡುಪಾಲ ಸಮೀಪದ ಮದೆನಾಡು ಗ್ರಾಮಕ್ಕೆ ಬರುತ್ತಿದ್ದಂತೆ ವ್ಯಾನ್ನ ಬಾನೆಟ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ವ್ಯಾನ್ ಅನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಬಳಿಕ ಬಾನೆಟ್ ತೆರೆದು ರಿಪೇರಿ ಮಾಡಲು ಮುಂದಾಗುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು, ವ್ಯಾನ್ ಹೊತ್ತಿ ಉರಿಯಲು ಆರಂಭಿಸಿದೆ.
ಒಂದು ವೇಳೆ ಚಾಲಕ ಹೊಗೆಯನ್ನು ಗಮನಿಸದೇ ವ್ಯಾನ್ ಚಾಲನೆ ಮಾಡಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ವ್ಯಾನ್ ಗೆ ಬೆಂಕಿ ಕಾಣಿಸಿಕೊಂಡ ಕುರಿತು ಮಾಹಿತಿ ಪಡೆದ ಮಡಿಕೇರಿ ಅಗ್ನಿಶಾಮಕ ದಳವು ಎರಡು ವಾಹನ ತಂದು ಬೆಂಕಿ ನಂದಿಸಿದೆ. ವ್ಯಾನ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv