ನವದೆಹಲಿ: 2002ರಲ್ಲಿ ನಡೆದ ಗೋಧ್ರಾ ದುರಂತಕ್ಕೆ (Godhra Train Tragedy) ಕಾರಣವಾದ ಘಟನೆಗಳ ಆಧಾರದ ಮೇಲೆ ನಿರ್ಮಾಣವಾದ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶ್ಲಾಘಿಸಿದ್ದಾರೆ. ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಚಿತ್ರತಂಡವನ್ನು ಮೋದಿ ಹೊಗಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಘಟನೆಯ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸಾಮಾನ್ಯ ಜನರು ಇದನ್ನು ಸಿನಿಮಾ ಮೂಲಕ ನೋಡಬಹುದು. ಈ ಚಲನಚಿತ್ರವನ್ನು ಜನರು ನೋಡಲೇಬೇಕು. ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರತಂಡ ಶ್ರಮಿಸಿದೆ ಎಂದು ಕೊಂಡಾಡಿದ್ದಾರೆ.
ಈ ದುರಂತದ ಘಟನೆಯನ್ನು ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ರಾಜಕೀಯಗೊಳಿಸಿವೆ. ಇದನ್ನು ಒಬ್ಬ ನಾಯಕನ ಪ್ರತಿಷ್ಠೆಗೆ ಕಳಂಕ ತರುವ ಅವಕಾಶವಾಗಿ ಬಳಸಿಕೊಂಡಿವೆ ಎಂದು ಬರೆದುಕೊಂಡಿದ್ದಾರೆ.
ಏನಿದು ಗೋಧ್ರಾ ರೈಲು ದುರಂತ?
ಬಿಹಾರದ ಮುಜಾಫರ್ಪುರದಿಂದ ಗುಜರಾತ್ನ ಅಹಮದಾಬಾದ್ಗೆ ಹೊರಟಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲು 2002ರ ಫೆ.27,ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್ನ ಗೋಧ್ರಾ ರೈಲು ನಿಲ್ದಾಣಕ್ಕೆ ತೆರಳಿತ್ತು. ಇದರಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್ಗಳಿಗೆ ಬೆಂಕಿ ಹಚ್ಚಿತ್ತು.
ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ, ವರದಿಯಲ್ಲಿ ಈ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು.
ಧೀರಜ್ ಸರ್ನಾ ನಿರ್ದೇಶನದ ‘ದಿ ಸಾಬರಮತಿ ರಿಪೋರ್ಟ್’ ಚಿತ್ರವು ನ.15 ರಂದು ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಸೇರಿದಂತೆ ಇತರರು ನಟಿಸಿದ್ದಾರೆ.