ಚಿಕ್ಕೋಡಿ: ಟ್ರಕ್ ಹಾಗೂ ಬೊಲೆರೋ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಘಟಪ್ರಭಾದಿಂದ ತರಕಾರಿ ಹೊತ್ತು ಕೊಲ್ಹಾಪುರ ಕಡೆಗೆ ತೆರಳುತ್ತಿದ್ದ ಬೊಲೆರೋ ವಾಹನ, ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ವಿರುದ್ಧ ದಿಕ್ಕಿಗೆ ಹೋಗಿ ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಈಸರ್ ಮಿನಿ ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೊಲೆರೋ ವಾಹನದಲ್ಲಿದ್ದ ನದೀಮ್, ರಾಜು ಅಹಮ್ಮದ್, ಶಬ್ಬೀರ ಸಯ್ಯದ್ ಹಾಗೂ ಲಾರಿಯಲ್ಲಿದ್ದ ಚಾಲಕ ರಮೇಶ್ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.
ಇನ್ನೂ ಲಾರಿ ಕ್ಲೀನರ್ ಆನಂದ್ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು 30 ರಿಂದ 40 ವಯಸ್ಸಿನವರಾಗಿದ್ದಾರೆ. ಘಟನೆಯಲ್ಲಿ ಸಾಹೀಮ್ ಹಾಗೂ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಸ್ಥಳಕ್ಕೆ ನಿಪ್ಪಾಣಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.