ಚಿತ್ರದುರ್ಗ: ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡಿರುವ ವ್ಯಕ್ತಿ ರಸ್ತೆಯಲ್ಲೇ ಒದ್ದಾಡುತ್ತಿದ್ದರೂ ಸಾರ್ವಜನಿಕರು ಸಹಾಯ ಮಾಡದೆ ಮಾನವೀಯತೆಯನ್ನು ಮರೆತಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ವಸಂತ ನಗರದ ಬಳಿ ಈ ಘಟನೆ ನಡೆದಿದೆ. ವಸಂತನಗರದಿಂದ ಉಡುವಳ್ಳಿಯಲ್ಲಿರುವ ಸೊಸೈಟಿಗೆ ಪಡಿತರ ಅಕ್ಕಿ ತರಲು ಇಬ್ಬರು ಗ್ರಾಮಸ್ಥರು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವೆಂಕಟೇಶ್ (54) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಕರಿಯಪ್ಪ ಅವರಿಗೆ ಗಂಭೀರ ಗಾಯಗಳಾಗಿವೆ. ಆದರೆ ಲಾರಿ ಯಾವುದೆಂದು ಪತ್ತೆಯಾಗಿಲ್ಲ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ.
ಈ ವೇಳೆ ಬೈಕಿನ ಹಿಂಬದಿ ಕುಳಿತಿದ್ದ ಕರಿಯಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ಕಾಲು ಮುರಿದುಕೊಂಡು, ಮಾಂಸ ಹಾಗೂ ಮೂಳೆ ಛಿದ್ರವಾಗಿ ರಕ್ತದ ಮಡುವಿನಲ್ಲಿ ನರಳಾಡುತಿದ್ದರು. ಆದರೆ ಸ್ಥಳದಲ್ಲೇ ಇದ್ದ ಸಾರ್ವಜನಿಕರು ರಕ್ತಸ್ರಾವದಿಂದ ನರಳುತ್ತ ರಸ್ತೆ ಮದ್ಯೆ ಬಿದ್ದಿರೋ ಗಾಯಾಳುವನ್ನು ಸಂತೈಸುವ ಗೋಜಿಗೆ ಹೋಗಿಲ್ಲ. ಅಲ್ಲದೆ ಕನಿಷ್ಟ ಅಂಬುಲೆನ್ಸ್ ಗೆ ಕರೆಮಾಡಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನೂ ಮಾಡದೆ ಅಮಾನವೀಯವಾಗಿ ವರ್ತಿಸಿದ್ದಾರೆ.
ಕೊನೆಗೆ ವಾಹನ ಸವಾರರು ದೃಶ್ಯ ಕಂಡು ತಕ್ಷಣ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಅಪಘಾತವಾಗಿ 1 ಗಂಟೆಯಾದರೂ ಸ್ಥಳಕ್ಕೆ ಅಂಬುಲೆನ್ಸ್ ಬರದ ಕಾರಣ ಆಟೋದಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹಿರಿಯೂರು ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.