ಬೆಂಗಳೂರು: ಯಾವುದೋ ಎಮೋಷನಲ್ನಲ್ಲಿ ಮಾತನಾಡಿ ಭರವಸೆ ನೀಡಿದ್ರೆ ಎಲ್ಲವನ್ನೂ ಈಡೇರಿಸೋಕೆ ಆಗಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ಭರವಸೆಗೆ ಟಾಂಗ್ ನೀಡಿದ್ದಾರೆ.
ಪಬ್ಲಿಕ್ ಟಿವಿ ಪ್ರತಿನಿಧಿ ಸುಖೇಶ್ ಜೊತೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ಅವರು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನನ್ನ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅವರು ಅಧಿಕಾರದಲ್ಲಿ ಇದ್ದಾಗ ನನ್ನ ಮೇಲೆ ಕೇಸು ಸಹಾ ಹಾಕಿಸಿದ್ರು. ಆದರೆ ನಾನು ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಪ್ಲಾನ್ ಆಫ್ ಆಕ್ಷನ್ ಪ್ರಕಾರ ಕೆಲಸ ಮಾಡಿದ್ದೇನೆ. ಫಲಿತಾಂಶಕ್ಕೆ ಮುನ್ನವೇ ನಾನು ಮತ್ತು ರಾಹುಲ್ ಗಾಂಧಿ ಕುಳಿತು ಮಾತನಾಡಿದ್ದೆವು. ನಮ್ಮ ಅಂಕಿ ಸಂಖ್ಯೆ ಎಷ್ಟು ಬಂದ್ರೆ ಏನು ಮಾಡಬೇಕು ಎಂದು ನಿರ್ಧರಿಸಿದ್ದೆವೋ ಹಾಗೆಯೇ ಮಾಡಿದ್ದೇವೆ ಎಂದರು.
ನನ್ನ ಪಕ್ಷ ನೀಡುವ ಜವಾಬ್ದಾರಿ ನಾನು ನಿರ್ವಹಿಸುತ್ತೇನೆ. ನನ್ನ ಮನಸ್ಸಲ್ಲಿ ಏನಿದೆ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಅವರು ಸರ್ಕಾರದ ಜವಾಬ್ದಾರಿ ಕೊಡ್ತಾರಾ ಪಕ್ಷದ ಜವಾಬ್ದಾರಿ ಕೊಡ್ತಾರಾ ಗೊತ್ತಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರಂತೆ, ನನಗೆ ಅರ್ಜೆಂಟ್ ಇಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ತಾಳ್ಮೆಯಿಂದ ಯೋಚಿಸಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಈಗಲೇ ಸಿದ್ಧನಿಲ್ಲ ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಖಂಡರಿಗೆ ರವಾನಿಸಿದ್ದಾರೆ.