ಬೆಂಗಳೂರು: ಇಷ್ಟು ದಿನ ಈರುಳ್ಳಿ ಬೆಲೆ ಕೇಳಿದ ಕೂಡಲೇ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿತ್ತು. ಈಗ ರೈತರ ಕಣ್ಣಿನಲ್ಲಿ ರಕ್ತವನ್ನೇ ಸುರಿಸುತ್ತಿದೆ. ಈರುಳ್ಳಿ ರೇಟ್ ನೆಲ ಕಚ್ಚಿದ್ದು ರೈತರಿಗೆ ಲಾಭ ಇರಲಿ ಅಸಲು ಸಹ ಸಿಗುತ್ತಿಲ್ಲ. ಆದರೆ ಮಧ್ಯವರ್ತಿಗಳು ಮಾತ್ರ ಹಣ ಮಾಡುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಗಗನಕ್ಕೆರಿದ್ದ ಈರುಳ್ಳಿ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದಿದೆ. ಒಂದು ಮೂಟೆಗೆ 50 ರಿಂದ 400 ರೂಪಾಯಿಗೆ ಮಧ್ಯವರ್ತಿಗಳು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ಒಂದು ಕೆಜಿಗೆ ಕೇವಲ 2 ರಿಂದ 10 ರೂಪಾಯಿ ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸಿಗುವ ಈರುಳ್ಳಿ ಬೆಲೆ ಮಾತ್ರ 30 ರಿಂದ 40 ರೂಪಾಯಿ ಇದೆ. ನಮ್ಮ ಬೆಳೆಗೆ ಸರಿಯಾದ ಬೆಲೆ ಇಲ್ಲ ಎಂದು ಈರುಳ್ಳಿ ಬೆಳೆಗಾರರು ಎಪಿಎಂಸಿ ಯಾರ್ಡ್ ನಲ್ಲಿ ಈರುಳ್ಳಿ ಬುಟ್ಟಿ ಹೊತ್ತು ಮೆರವಣಿಗೆ ಮಾಡಿದರು.
ಅನ್ನದಾತನಿಗೆ ಅನ್ಯಾಯವಾಗುತ್ತಿದೆ, ಬೇರಯವರ ಕಣ್ಣಲ್ಲಿ ನೀರು ಬಂದರೆ ಕೂಡಲೇ ಸ್ಪಂದಿಸುವ ಸರ್ಕಾರ ರೈತರಿಗೆ ಮಾತ್ರ ದ್ರೋಹ ಮಾಡುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರ ಹಾಗೂ ಮೋದಿ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ರೈತರು ಮೋದಿ ವಿರುದ್ಧ ದಿಕ್ಕಾರ ಕೂಗಿದರು. ಜೊತೆಗೆ ಎಪಿಎಂಸಿಯ ಕಾರ್ಯದರ್ಶಿ ಅನಿಲಾ ಕುಮಾರಿ ಅವರಿಗೆ ಮನವಿ ಪತ್ರ ನೀಡಿ ನಮಗೆ ನ್ಯಾಯ ಕೊಡಿಸಿ ಎಂದು ಕೇಳಿದರು.
ಬೆಲೆ ಏಕಾಏಕಿ ಕುಸಿಯಲು ಕಾರಣವಾಗಿರುವುದೇ ಈರುಳ್ಳಿ ರಫ್ತು ಅನ್ನು ಬಂದ್ ಮಾಡಲಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಸ್ಟಾಕ್ ಜಾಸ್ತಿಯಾಗಿ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ.