ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರಾದ ವಿ.ಕೆ ಸಕ್ಸೆನಾ (VK Saxena), ಜಾರಿ ನಿರ್ದೇಶನಾಲಯಕ್ಕೆ (ED) ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಸೋಲಿನ ಬಳಿಕ ಅಗ್ನಿಪರೀಕ್ಷೆಯಾಗಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi elections) ಇನ್ನೆರಡು ತಿಂಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ
ಕೇಜ್ರಿವಾಲ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಆರೋಪದಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು, ಆದರೆ ವಿಚಾರಣೆ ಆರಂಭವಾಗಿರಲಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರ ಅನುಮೋದನೆಯನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದ ನಂತರ, ಇಡಿ ಅನುಮತಿ ಕೋರಿ ಪತ್ರ ಬರೆದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣನಾ? ನನಗೂ ಸಿ.ಟಿ ರವಿ ಬಗ್ಗೆ ಸಿಂಪತಿ ಇದೆ – ಡಿಕೆಶಿ
ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾಡಿದ ಬಹುದೊಡ್ಡ ಆರೋಪಗಳಲ್ಲಿ ಮದ್ಯ ನೀತಿ ಹಗರಣವೂ ಒಂದಾಗಿದೆ. ಹಗರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಇಡಿ, ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನ ಬಂಧಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಎಪಿ ಮುಖ್ಯಸ್ಥರು ಸೆಪ್ಟೆಂಬರ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2025ರ ಚುನಾವಣೆಯಲ್ಲಿ ಜನರು ತಮ್ಮ ಪಕ್ಷವನ್ನು ಮರು ಆಯ್ಕೆ ಮಾಡಿದ ಬಳಿಕವೇ ಉನ್ನತ ಹುದ್ದೆಗಳಿಗೆ ಮರಳುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇನ್ನೂ ಕೇಜ್ರಿವಾಲ್ ಮತ್ತು ಆಪ್ ಪಕ್ಷದ ವಿರುದ್ಧ ಇಡಿ ಸಲ್ಲಿಸಿದ ಕೊನೆಯ ಚಾರ್ಜ್ಶೀಟ್ನಲ್ಲಿ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಹಗರಣದ ಕಿಂಗ್ಪಿನ್ ಎಂದು ಹೆಸರಿಸಿತ್ತು. ಸಿಸೋಡಿಯಾ ಸಹ ಮದ್ಯನೀತಿ ಹಗರಣದಲ್ಲಿ 18 ತಿಂಗಳು ಜೈಲು ವಾಸ ಅನುಭವಿಸಿ, ಕಳೆದ ಆಗಸ್ಟ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ
ಇ.ಡಿ ಆರೋಪ ಏನು?
ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು 100 ಕೋಟಿ ಲಂಚ ಪಡೆಯುವ ಸಲುವಾಗಿ 2021-22ನೇ ಸಾಲಿನ ಅಬಕಾರಿ ನೀತಿಯಲ್ಲಿ ಬದಲಾವಣೆ ತಂದಿದ್ದರು. ಇದರಲ್ಲಿ 45 ಕೋಟಿ ರೂ.ಗಳನ್ನ ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು ಎಂಬುದು ಇ.ಡಿ ಆರೋಪ. ಈಗಾಗಲೇ ಚಾರ್ಜ್ಶೀಟ್ ರದ್ದುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ (ಡಿ.20) ದೆಹಲಿ ಹೈಕೋರ್ಟ್ ಇ.ಡಿಗೆ ನೋಟಿಸ್ ನೀಡಿದೆ.