ನವದೆಹಲಿ: ಬೆಲೆ ಏರಿಕೆ ವಿರೋಧಿಸಿ ತೃಣಮೂಲ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಎದ್ದು ನಿಂತು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ.
ಮಳೆಗಾಲದ ಸಂಸತ್ ಅಧಿವೇಶನ ಶುರುವಾಗಿ ಎರಡು ವಾರ ಮುಗಿದ ನಂತರ ಸುಗಮ ಕಲಾಪ ನಡೆದಿದೆ. ಕಾಂಗ್ರೆಸ್ನ ನಾಲ್ವರು ಸಂಸದರ ಮೇಲಿನ ಅಮಾನತು ರದ್ದು ಬೆನ್ನಲ್ಲೇ ಸುಗಮ ಕಲಾಪಕ್ಕೆ ವಿಪಕ್ಷಗಳು ಅವಕಾಶ ಮಾಡಿಕೊಟ್ಟಿದೆ. ಇಂದು ಜಿಎಸ್ಟಿ ಹೇರಿಕೆ, ಹಣದುಬ್ಬರ ಮೇಲೆ ಚರ್ಚೆಗೆ ಕೇಂದ್ರ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. ಇವತ್ತು ಬೆಳಗ್ಗೆ ಕಲಾಪ ಶುರುವಾಗುತ್ತಲೇ ದರ ಏರಿಕೆ ಪ್ರಸ್ತಾಪಿಸಿ ಸಂಸತ್ನ ಉಭಯ ಸದನಗಳಲ್ಲೂ ವಿಪಕ್ಷಗಳು ಗದ್ದಲ ಎಬ್ಬಿಸಿದರು.
ಹಣದುಬ್ಬರ, ತೈಲ ಬೆಲೆ ಏರಿಕೆ ಪ್ರಸ್ತಾಪಿಸಿದ ಕಾಂಗ್ರೆಸ್ನ ಮನೀಶ್ ತಿವಾರಿ, ಡಿಎಂಕೆಯ ಕನಿಮೋಳಿ, ಟಿಎಂಸಿಯ ಕಕೊಳಿ ಘೋಷ್ ದಸ್ತಿದಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಕೊಳಿ ಘೋಷ್ ಅವರಂತೂ, ಹಸಿ ಬದನೆ ಕಚ್ಚಿ, ಜನ ಹಸಿ ತರಕಾರಿ ತಿನ್ನಬೇಕೆಂದು ಬಯಸ್ತಿದ್ಯಾ ಎಂದು ಆಕ್ರೋಶ ಹೊರಹಾಕಿದರು.
ಇತ್ತೀಚಿಗೆ ಕಡಿಮೆ ಅವಧಿಯಲ್ಲಿಯೇ ಸಿಲಿಂಡರ್ ದರ ನಾಲ್ಕು ಬಾರಿ ಹೆಚ್ಚಾಗಿದೆ. ಒಂದೊಮ್ಮೆ 600 ರೂ. ಇದ್ದ ಗ್ಯಾಸ್ ಬೆಲೆ ಈಗ 1,100 ರೂಪಾಯಿ ದಾಟಿದೆ. ಸಾಮಾನ್ಯರಿಗೆ ಅಡುಗೆ ಮಾಡಿಕೊಳ್ಳುವುದು ಭಾರವಾಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಡವರಿಗೆ ಹಾಗೂ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಸಿಲಿಂಡರ್ ದರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಐವರು – ನಾಗರಪಂಚಮಿಯಂದು ಸುಬ್ರಹ್ಮಣ್ಯಕ್ಕೆ ಪ್ರವೇಶವಿಲ್ಲ
ಬಿಜೆಪಿಯ ನಿಶಿಕಾಂತ್ ದುಬೇ, ಕೇಂದ್ರದ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಶ್ರೀಲಂಕಾ, ಬಾಂಗ್ಲಾ, ಭೂತಾನ್, ಬಾಂಗ್ಲಾ ನೋಡಿ. ನಮ್ಮಲ್ಲಿನ ಬಡವರಿಗೆ ಎರಡು ಹೊತ್ತಿನ ಊಟವಾದರೂ ಸಿಗುತ್ತದೆ. ಅದಕ್ಕೆ ನಾವು ಪ್ರಧಾನಿ ಮೊದಿಗೆ ಧನ್ಯವಾದ ಹೇಳ್ಬೇಕು ಎಂದರು. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು