– ಪೇಜಾವರ ಶ್ರೀ ಸೇರಿದಂತೆ ಹಲವು ಗಣ್ಯರು ಭಾಗಿ
ಬೆಂಗಳೂರು: ಕೇಂದ್ರ ಮಾಜಿ ಸಚಿವ, ದಿವಂಗತ ಜಾಫರ್ ಶರೀಫ್ ಅವರಿಗೆ ಇಂದು ನಗರದ ಮಜೀದ್ ಖಾದ್ರಿಯಾ ಮೈದಾನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೇಜಾವರ ಶ್ರೀಗಳು ಸೇರಿದಂತೆ ರಾಜ್ಯ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು, ಜಾಫರ್ ಶರೀಫ್ ಅವರ ಹೆಸರಿನಲ್ಲಿ ಯೋಜನೆ ಅಥವಾ ಕಾರ್ಯಕ್ರಮ ಜಾರಿಗೆ ಮಾಡುವುದಕ್ಕೆ ಚಿಂತಿಸಲಾಗಿದೆ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ಸರ್ಕಾರ ಕಾರ್ಯಕ್ರಮಕ್ಕೆ ಅವರ ಹೆಸರಿಡಲಾಗುವುದು. ಶರೀಫ್ ಅವರಿ ಶಾರೀರಿಕವಾಗಿ, ಭೌತಿಕವಾಗಿ ನಮ್ಮನ್ನ ಅಗಲಿದ್ದಾರೆ ಅಷ್ಟೇ, ಅವರು ನಮ್ಮ ಜೊತೆಗೆ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕಾರ್ಯಕ್ರಮ ಯೋಜನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ರೆಹಮಾನ್ ಖಾನ್, ಸ್ಪೀಕರ್ ರಮೇಶ್ ಕುಮಾರ್, ಬಿ.ಕೆ ಹರಿಪ್ರಸಾದ್, ಸಿಎಂ ಇಬ್ರಾಹಿಂ, ಯುಟಿ ಖಾದರ್, ಕೆ.ಹೆಚ್ ಮುನಿಯಪ್ಪ, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿ ಇದ್ದರು.
ಪೇಜಾವರ ಶ್ರೀಗಳ ಭಾಷಣ ತಡೆದ ಜಮೀರ್:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು ಜಾಫರ್ ಶರೀಫ್ ಅವರಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಆದರೆ ಈ ವೇಳೆ ನಮಾಜ್ ಆರಂಭವಾದದ್ದನ್ನು ಗಮನಿಸಿದ ಸಚಿವ ಜಮೀರ್ ಅವರು ಶ್ರೀಗಳ ಭಾಷಣವನ್ನು ಅರ್ಧಕ್ಕೆ ತಡೆದರು. 2 ನಿಮಿಷಗಳ ಬಳಿಕ ಭಾಷಣ ಆರಂಭಿಸಿದ ಪೇಜಾವರ ಶ್ರೀಗಳು, ಸಂಧ್ಯಾ ಸಮಯದಲ್ಲಿ ದೇವರ ಪ್ರಾರ್ಥನೆ ಮಾಡುವ ಮುಸಲ್ಮಾನ ಭಾಂದವರಿಗೆ ಧನ್ಯವಾದ ಎಂದು ಹೇಳಿ ಭಾಷಣ ಆರಂಭಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv