ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಬೆಳ್ಳಂ ಬೆಳಗ್ಗೆಯೇ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ಅನುಭವಿಸುವಂತಾಗಿದೆ. ಕೈಮರದಿಂದ 4 ಕಿ.ಮೀ. ದೂರದಲ್ಲಿ ದತ್ತಪೀಠ (Datta Peetha) ಹಾಗೂ ಮುಳ್ಳಯ್ಯನಗಿರಿ (Mullayyanagiri) ಹೋಗುವ ಸರ್ಕಲ್ ಬಳಿಯೇ ಮರ ಬಿದ್ದಿದ್ದು, ಎರಡು ಸ್ಥಳಗಳಿಗೆ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಸ್ಥಳೀಯರು-ಗ್ರಾಮಾಂತರ ಪೊಲೀಸರು ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್ ಮಾಡ್ಕೊಂಡು ಬ್ಲ್ಯಾಕ್ಮೇಲ್ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಇನ್ನು ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಉರುಳಿದ್ದು, ನಾಲ್ಕೈದು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರ ಬುಡಸಮೇತ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್-ಇಸ್ರೇಲ್ ಸಂಘರ್ಷ ತೀವ್ರ – ಇಸ್ರೇಲ್ ಮಿಸೈಲ್ ದಾಳಿಗೆ ಇರಾನ್ನ 14 ಅಧಿಕಾರಿಗಳು ಬಲಿ