– ಐಜಿಪಿ ಮೊರೆ ಹೋದ ನೊಂದ ಮುಸ್ಲಿಮರು
ಬಳ್ಳಾರಿ: ಜೀವನದಲ್ಲೊಮ್ಮೆ ಹಜ್ ಯಾತ್ರೆ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಹಾಗಾಗಿ ಅದೆಷ್ಟೇ ಜನ ಬಡವರಾದರೂ ಸರಿ ಹಣ ಕೂಡಿಟ್ಟು ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ಹೋಗುತ್ತಾರೆ. ಆದರೆ ಏಜೆನ್ಸಿಯೊಂದು ಹಜ್ ಉಮ್ರಾ ಯಾತ್ರೆ ಹೆಸರಲ್ಲಿ ನೂರಾರು ಜನರಿಗೆ ಪಂಗನಾಮ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದೆ.
ಬಡ ಅಮಾಯಕ ಜನರನ್ನು ನಂಬಿಸಿ, ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಮ್ಮ ಜನ ಇಂತಹ ಅದೆಷ್ಟೋ ಘಟನೆಗಳು ನಡೆದರೂ ಇನ್ನೂ ಬುದ್ಧಿ ಕಲಿತಿಲ್ಲ. ಐಎಂಎ ವಂಚಕ ಮನ್ಸೂರ್ ಖಾನ್ ರೀತಿಯಲ್ಲೇ ಬಳ್ಳಾರಿಯಲ್ಲೊಬ್ಬ ನೂರಾರು ಜನರಿಗೆ ಪಂಗನಾಮ ಹಾಕಿದ್ದಾನೆ. ಹೊಸಪೇಟೆಯ ಮೆಹಬೂಬ್ ಸಾಬ್ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾಕ್ಕೆ ಕಳಿಸುತ್ತೇವೆಂದು ಒಬ್ಬೊಬ್ಬರಿಂದ ತಲಾ 30 ರಿಂದ 60 ಸಾವಿರ ರೂಗಳಂತೆ 150ಕ್ಕೂ ಹೆಚ್ಚು ಜನರಿಂದ ಹಣ ಪೀಕಿ ಪರಾರಿಯಾಗಿದ್ದಾನೆ. ವಂಚನೆಗೊಳಗಾದ ನೂರಾರು ಜನ ಈಗ ಯಾತ್ರೆಯೂ ಇಲ್ಲದೇ ಹಣವೂ ಸಿಗದೇ ಕಣ್ಣಿರಿಡುತ್ತಿದ್ದಾರೆ.
ಯಾತ್ರೆಗೆ ಹೋಗಲು ಹಣ ಕೊಟ್ಟವರು ದಿನನಿತ್ಯ ಈತನ ಕಚೇರಿಗೆ ಬಂದು ವಾಪಸ್ ಆಗಿದ್ದಾರೆ. ಆದರೆ ಈತ ಮಾತ್ರ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ನೂರಾರು ಜನರಿಗೆ ದಿಕ್ಕೇ ತೋಚದಂತಾಗಿದೆ. ಆತ್ತ ಮೋಸ ಹೋದ ಜನರು ಹಣವೂ ಇಲ್ಲದೆ ಯಾತ್ರೆಗೂ ಹೋಗದೆ ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿಯವರಿಗೆ ದೂರು ಕೊಟ್ಟಿದ್ದಾರೆ.
ಬಳ್ಳಾರಿಯಲ್ಲಿ ಕಳೆದೆರಡು ವರ್ಷಗಳಿಂದ ಹಜ್ ಉಮ್ರಾ ಯಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ವಂಚನೆಯಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಮುಸ್ಲಿಂ ಸಮಾಜದವರನ್ನೇ ಟಾರ್ಗೆಟ್ ಮಾಡುವ ಇಂತಹ ವಂಚಕರು ಯಾತ್ರೆ ಹೆಸರಲ್ಲಿ ಪಂಗನಾಮ ಹಾಕ್ತಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾಯಕರನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]