ಬೆಂಗಳೂರು: ಗ್ರಾಮೀಣ ಭಾಗದ ಕಾರ್ಮಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಇಲಾಖೆ 6 ನೂತನ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕ ಪ್ರದೇಶದಲ್ಲಿ ನೂತನ ಬಸ್ಗಳಿಗೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಹಾಗೂ ಸಂಸದ ವೀರಪ್ಪ ಮೊಯ್ಲಿ ಚಾಲನೆ ನೀಡಿದರು. ಇನ್ನೂ ಗ್ರಾಮೀಣ ಭಾಗದ ಸಾವಿರಾರು ಕಾರ್ಮಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಯವರೆಗೂ ಖಾಸಗಿ ಬಸ್ ಮೂಲಕ ಸಂಚಾರ ಮಾಡುತ್ತಿದ್ದರು. ಹೀಗಾಗಿ ಸಾರಿಗೆ ಇಲಾಖೆ ವತಿಯಿಂದ ಇಂದು 6 ನೂತನ ಬಿಎಂಟಿಸಿ ಬಸ್ಗಳ ಸೇವೆ ಕಲ್ಪಿಸಲಾಗಿದೆ. ಈ ಬಸ್ಗಳು ಪ್ರತಿನಿತ್ಯ ಯಶವಂತಪುರದಿಂದ ದಾಬಸ್ಪೇಟೆ ಕೈಗಾರಿಕಾ ಪ್ರದೇಶಕ್ಕೆ 6 ಸುತ್ತುವಳಿಗಳನ್ನ ಅರ್ಧ ಗಂಟೆಯ ಅಂತರದಲ್ಲಿ ಕಾರ್ಯಾಚರಣೆ ಮಾಡುತ್ತವೆ.
ಉದ್ಘಾಟನೆಯ ನಂತರ ಮಾತನಾಡಿದ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ, ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನೆಲಮಂಗಲದ ಪಟ್ಟಣಕ್ಕೆ ಹೈಟೆಕ್ ಬಸ್ ಕೋರ್ಟ್ ನಿರ್ಮಿಸಲಾಗುವುದು ಎಂದರು. ಬಸ್ ನಿಲ್ದಾಣದ ಜೊತೆಗೆ ಶಾಪಿಂಗ್ ಮಾಲ್, ಕಚೇರಿಗಳು, ಅಂಗಡಿಗಳನ್ನ ಒಳಗೊಂಡಿರುವಂತೆ ಕರ್ನಾಟಕ ರಾಜ್ಯದಲ್ಲೇ ವಿನೂತನ ಬಸ್ ನಿಲ್ದಾಣವನ್ನ ನಿರ್ಮಿಸಲಾಗುವುದು ಎಂದರು.
ಬಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಜನರಿಲ್ಲದ ಕಾರಣ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಾರ್ಖಾನೆಗಳಿಂದ ನೂರಾರು ಮಹಿಳಾ ಕಾರ್ಮಿಕರನ್ನ ಕರೆತಂದ ಪ್ರಸಂಗವೂ ಕೂಡ ನಡೆದು ಮುಜುಗರಕ್ಕೀಡಾಯಿತು.