ಬೆಂಗಳೂರು: ಸಂಚಾರ ನಿಯಮದ ಕುರಿತು ಜಾಗೃತಿ ಮೂಡಿಸಲು ಪೊಲೀಸರು ವಿವಿಧ ಉಪಾಯಗಳನ್ನು ಅನುಸರಿಸುತ್ತಿದ್ದು, ಇದರ ಭಾಗವಾಗಿ ಯಮ ಧರ್ಮರಾಜನನ್ನು ರಸ್ತೆಗೆ ಇಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಿಸ್ಟರ್ ಯಮಧರ್ಮರಾಜ ಪ್ರತ್ಯಕ್ಷನಾಗಿ ಟ್ರಾಫಿಕ್ ನೋಡಿಕೊಳ್ಳುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕುಣಿಕೆ ಹಾಕಿದ್ದಾನೆ.
ಯಮಧರ್ಮರಾಜನ ವೇಶಭೂಷಣ ತೊಟ್ಟ ವ್ಯಕ್ತಿ ಮೂಲಕ ಹೆಲ್ಮೆಟ್ ಹಾಕದೇ ವಾಹನ ಚಾಲನೆ ಮಾಡುವವರು, ದಾಖಲೆಗಳು ಇಲ್ಲದೇ ವಾಹನ ಚಾಲನೆ ಮಾಡುವವರನ್ನು ಹಿಡಿದು ಕುಣಿಕೆ ಹಾಕಿ ಎಚ್ಚರಿಕೆ ಕೊಟ್ಟು, ಜಾಗೃತಿ ಮೂಡಿಸಿದ್ದಾರೆ.
ಮೆಜೆಸ್ಟಿಕ್ ಬಳಿ ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿಯವರು ಸಂಚಾರ ನಿಯಮದ ಕುರಿತು ವಿಭಿನ್ನವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನದಲ್ಲಿ ಸಂಚರಿಸಬೇಡಿ, ನಿಮ್ಮ ತಲೆಯನ್ನು ಯಮಧರ್ಮನಿಗೆ ಬೀಡಬೇಡಿ ಎಂದು ಹೇಳುವ ಮೂಲಕ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.