ಹುಬ್ಬಳ್ಳಿ: ವಿವಿಧ ಡ್ರೈವಿಂಗ್ ಸ್ಕೂಲ್ನಿಂದ ಆಗಮಿಸಿದ 15 ಹೆಚ್ಚು ಕಾರುಗಳು ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸುವುದರ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದವು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರು ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದವು. ರ್ಯಾಲಿಗೆ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ. ಸಂದೀಗವಾಡ ಚಾಲನೆ ನೀಡಿದರು.
ಈದ್ಗಾ ಮೈದಾನದಿಂದ ಹೊರಟ ರ್ಯಾಲಿ ಚನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣ, ಹೊಸರು ಕ್ರಾಸ್, ವಿದ್ಯಾನಗರ, ಬಿ.ವಿ.ಬಿ.ಎಂಜಿನಿಯರಿಂಗ್ ಕಾಲೇಜು, ಟೆಂಡರ್ ಶ್ಯೂರ್ ರಸ್ತೆಯ ಮೂಲಕ ಚೇತನಾ ಕಾಲೇಜು ಬಳಿ ಮುಕ್ತಾಯವಾಯಿತು. ಸೀಟ್ ಬೆಲ್ಟ್ ಧರಿಸಿ, ಸಂಚಾರಿ ನಿಯಮ ಹಾಗೂ ಸಂಜ್ಞೆಗಳನ್ನು ಪಾಲಿಸಿ ಸಾರ್ವನಿಕರಿಗೆ ಮಾದರಿಯಾಗುವಂತೆ ವಾಹನ ಚಾಲಕರು ಕಾರು ಚಲಾಯಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಲ್ವತ್ವಾಡಮಠ, ಪಶ್ಚಿಮ ಸಾರಿಗೆ ಅಧಿಕಾರಿ ಸಿ.ಡಿ.ನಾಯಕ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮೋಟಾರು ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ರಫೀಕ್ ಅಹಮದ್ ಕಿತ್ತೂರ್, ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಮಹಾಂತೇಶ್ ಹೊಸಪೇಟೆ, ರತನ್ ಕುಮಾರ್ ಜೀರಗಾಳ, ಪ್ರಶಾಂತ್ ನಾಯ್ಕ, ವಾಹನ ತರಬೇತಿ ಶಾಲೆಗಳ ತರಬೇತುದಾರರಾದ ಪುಷ್ಪಾ, ಪ್ರತಿಭಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.