ರಾಯಚೂರು: ದೇಶದ ಪಿತಾಮಹಾ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಹಿನ್ನೆಲೆ ರಾಯಚೂರಿನಲ್ಲಿ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ರೀತಿಯಲ್ಲಿ ಅರಿವು ಮೂಡಿಸಿದ್ದು, ಸಂಚಾರಿ ಪೊಲೀಸರು ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ಹಾಕುವ ಜೊತೆಗೆ ಉಚಿತ ಹೆಲ್ಮೆಟ್ ನೀಡಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಗೆ ಬುದ್ಧಿ ಹೇಳಿ, ಉಚಿತವಾಗಿ ಹೆಲ್ಮೆಟ್ ಕೊಟ್ಟು ಧರಿಸಲು ಎಚ್ಚರಿಕೆ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಸಂತೋಷ್ ಹೆಲ್ಮೆಟ್ಗಳನ್ನ ವಾಹನ ಸವಾರರಿಗೆ ವಿತರಿಸಿದರು. ಜೊತೆಗೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಂದ ಪ್ರತಿಜ್ಞೆ ಮಾಡಿಸಲಾಯಿತು.
ಎಷ್ಟೇ ದಂಡ ಹಾಕುವ ಕಠಿಣ ನಿಯಮಗಳನ್ನ ಜಾರಿಗೆ ತಂದರೂ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸುತ್ತಿಲ್ಲ. ರಸ್ತೆ ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪುವ ಪ್ರಕರಣಗಳೇ ಹೆಚ್ಚಿರುವ ಕಾರಣ ಜನರಲ್ಲಿ ಅರಿವು ಮೂಡಿಸಲು ಉಚಿತ ಹೆಲ್ಮೆಟ್ ನೀಡಲಾಗಿದೆ ಎಂದು ಎಸ್ಪಿ ಹೇಳಿದರು.
ಇದೇ ವೇಳೆ ಹೆಲ್ಮೆಟ್ ಧರಿಸದ ಸವಾರರಿಗೆ ದಂಡವನ್ನೂ ವಿಧಿಸಲಾಯಿತು. ಆರ್ಯವೈಶ್ಯ ಸಂಘದ ಮುಖಂಡ ಗೋಪಾಲಯ್ಯ ಈ ಜಾಗೃತಿ ಕಾರ್ಯಕ್ರಮಕ್ಕೆ ಉಚಿತವಾಗಿ ಹೆಲ್ಮೆಟ್ಗಳನ್ನ ನೀಡುವ ಮೂಲಕ ಮಹಾತ್ಮ ಗಾಂಧಿಯ ಜಯಂತೋತ್ಸವನ್ನು ವಿಭಿನ್ನವಾಗಿ ಆಚರಿಸಿದರು.