ಬಾಗಲಕೋಟೆ: ನಿಯಂತ್ರಣ ತಪ್ಪಿ ಘಟಪ್ರಭಾ ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಎಂಜಿನ್ ಬಿದ್ದು, ಇಬ್ಬರು ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂಬ ಶಂಕೆ ಜಿಲ್ಲೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿ ವ್ಯಕ್ತವಾಗಿದೆ.
ಶಿವರುದ್ರಪ್ಪ ಪೋಳ (55) ಮತ್ತು ಪೈಗಂಬರ್ ಲಾಡಕನ್ (25) ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಎಂಜಿನ್ನಲ್ಲಿ ಹೊರಟಿದ್ದ ಮೂವರು ಕಾಲುವೆಗೆ ಬಿದ್ದಾರೆ. ಅವರಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕಾಲುವೆಯಲ್ಲಿ ಬಿದ್ದ ಮೂವರಲ್ಲಿ ಶಂಕ್ರಪ್ಪ ಕಾಲುವೆಯಿಂದ ಪಾರಾಗಿದ್ದಾರೆ.
ಭಾನುವಾರ ತಡರಾತ್ರಿ ಹೊಲಕ್ಕೆ ಹೋಗಿ ಬರುವ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ರಾತ್ರಿ ಈ ಘಟನೆ ಡೆದಿದರೂ ಇದೂವರೆಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಆರೋಪಿಸಲಾಗುತ್ತಿದೆ.
ಮಹಾಲಿಂಗಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸ್ಥಳೀಯರು ಕಾಲುವೆ ಪಕ್ಕದಲ್ಲಿನ ಬಾರಿ ಗಿಡಕ್ಕೆ ಹಗ್ಗ ಕಟ್ಟಿ ಕಾಲುವೆಯಿಂದ ಶವ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಕುಳಲಿ ಗ್ರಾಮಸ್ಥರು ಜಮಾಯಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.