ಮಡಿಕೇರಿ: ಮೈ ಕೊರೆಯುವ ಚಳಿಗಾಲ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಾತ್ರೆಯೇ ಸೇರುತ್ತೆ, ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಸರ್ಗದ ಮಡಿಲಲ್ಲಿ ಮೈ ಮರೆಯುತ್ತಾ ಕಳೆದು ಹೋಗುತ್ತಾರೆ. ಚಳಿಯ ವಾತಾವರಣಕ್ಕೆ ಇದೀಗ ಕಾಫಿನಾಡು ರಂಗೇರಿದ್ದು ಪ್ರವಾಸಿಗರು ಕೊಡಗಿಗೆ ಲಗ್ಗೆಯಿಟ್ಟು ಎಂಜಾಯ್ ಮಾಡ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಚಳಿಯ ಆಹ್ಲಾದಕಾರ ವಾತಾವರಣವನ್ನು ಸವಿಯಲು ಇದೀಗ ಪ್ರವಾಸಿಗರು ಕೊಡಗಿನತ್ತ ಲಗ್ಗೆ ಹಾಕುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ ಆಗಮಿಸಿರುವ ಪ್ರಕೃತಿ ಪ್ರಿಯರು ಕೊಡಗಿನ ಹಿತಕರ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಸಂಜೆ ಆಗುತ್ತಲೆ ಮಡಿಕೇರಿಯ ರಾಜಾಸೀಟ್ ಜನರಿಂದ ತುಂಬಿ ತುಳುಕುತ್ತೆ. ಪ್ರಕೃತಿ ಸೌಂದರ್ಯ ಸವಿಯುತ್ತಲೆ ಸಂಜೆಯ ಹಿತಕರ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಕರಗುವ ಕೆಂಪು ಸೂರ್ಯನನ್ನು ಕಣ್ಣು ತುಂಬಿಕೊಂಡು ಮೈ ಮರೆಯುತ್ತಿದ್ದಾರೆ.
ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚೆ ಭಾರೀ ಸಂಖ್ಯೆಯ ಜನರು ಕೊಡಗಿನತ್ತ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ವಿಶೇಷವಾಗಿ ರಾಜಾಸೀಟ್ ತುಂಬೆಲ್ಲಾ ಜನ ಸಾಗರವೇ ತುಂಬಿಕೊಂಡಂತೆ ನೆರೆದಿದ್ದ ಜನಸ್ಥೋಮ ರಾಜಾಸೀಟ್ನ ಸೂರ್ಯಾಸ್ಥದ ಸವಿಯನ್ನು ಸವಿಯುತ್ತಾ ತಮ್ಮ ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡಿದರು.
ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ನಿತ್ಯದ ಕಾಯಕ ಮುಗಿಸಿ ಬೆಟ್ಟಗುಡ್ಡಗಳ ಮಡಿಲಲ್ಲಿ ವಿರಮಿಸುವ ನೇಸರನ ಕಂಡು ಜನರು ಖುಷಿಪಟ್ಟರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಚಳಿಯ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ.